ಎಲ್ಲರಿಗೂ ನಮಸ್ಕಾರ
ಇಂಥದೊಂದು ಕಾರ್ಯಕ್ರಮ ಮಾಡಿದ್ದಕ್ಕಾಗಿ ನಿಮಗೆ ಅಭಿನಂದನೆಗಳು. ನನ್ನನ್ನು ಕರೆದದ್ದಕ್ಕಾಗಿ ಧನ್ಯವಾದಗಳು.
ಮಾಧ್ಯಮ ಎನ್ನುವುದರ ಅಸ್ತಿತ್ವದ ಬಗ್ಗೆಯೇ ಗೊಂದಲ- ಸಂಶಯ ಮೂಡಿರುವ ಈ ದಿನಗಳಲ್ಲಿ ಇಂತಹ ಚರ್ಚೆಗಳು ಸ್ವಾಗತಾರ್ಹ ಅಂತ ಅನ್ನಿಸುತ್ತದೆ.
ಗಾಂಧಿ ಹಾಗೂ ಮಾಧ್ಯಮ ಎನ್ನುವುದರ ಬಗ್ಗೆ ಮಾತಾಡಬೇಕು ಅಂತ ನನಗೆ ಮೊದಲು ಪ್ರೀತಿ ನಾಗರಾಜ ಅವರು ಹೇಳಿದಾಗ ಈಗಿನ ಕಾಲಕ್ಕೆ ನಾವು ಗಾಂಧಿಯ ಬಗ್ಗೆ ಹೆಚ್ಚು ಮಾತಾಡಬೇಕೋ ಅಥವಾ ಮಾಧ್ಯಮ ದ ಬಗ್ಗೆ ಮಾತಾಡಬೇಕೋ ಅನ್ನೋ ವಿಚಾರಕ್ಕೆ ಬಿದ್ದೆ. ಆಲ್ ರೈಟ್, ಎರಡೂ ಆಗಬಹುದೇನೋ ಅಂದುಕೊಂಡು ಮುಂದಕ್ಕೆ ಹೋಗೋಣ.
ಮೊದಲಿಗೆ ಕೆಲವು ವಿಕಿಪೀಡಿಯಾ ಶೈಲಿಯ ಮಾಹಿತಿ . ಗಾಂಧೀಜಿ ಅವರು ತಮ್ಮ ೭೮ ವರ್ಷದ ಜೀವನದಲ್ಲಿ ೪೫ ವರ್ಷಕ್ಕೂ ಹೆಚ್ಚು ಕಾಲ ಪತ್ರಕರ್ತರಾಗಿದ್ದರು. ಅವರು ಏಳು ಪತ್ರಿಕೆಗಳ ಜೊತೆ ಸಂಬಂಧ ಇಟ್ಟುಕೊಂಡಿದ್ದರು. ಅವರು ಅವುಗಳಲ್ಲಿ ಲೇಖನ ಬರೆದರು, ಅವುಗಳ ಸಂಪಾದನೆ ಮಾಡಿದರು ಅಥವಾ ಅವುಗಳನ್ನು ಆರಂಭಿಸಿದರು.
ಅವರು ಶುರು ಮಾಡಿದ ಮೊಟ್ಟ ಮೊದಲ ಪತ್ರಿಕೆ ʻಇಂಡಿಯನ್ ಒಪಿನಿಯನ್ʼ , ೧೯೦೩ ರಲ್ಲಿ. ಕೊನೆಯ ಪತ್ರಿಕೆಗಳು ಹರಿಜನ, ಹರಿಜನ ಸೇವಕ, ಹರಿಜನ ಬಂಧು ೧೯೩೩. ನಡುವೆ ಯಂಗ ಇಂಡಿಯಾ ಹಾಗೂ ನವಜೀವನ ದ ಸಂಪಾದಕರಾಗಿದ್ದರು. ಇಂಡಿಯನ್ ಒಪಿನಿಯನ್, ಯಂಗ್ ಇಂಡಿಯಾ, ಹಾಗೂ ಹರಿಜನ ಇಂಗ್ಲೀಷ ಪತ್ರಿಕೆಗಳು. ನವಜೀವನ ಗುಜರಾತಿ ಹಾಗೂ ಹಿಂದಿ. ಹರಿಜನ ಬಂಧು ಗುಜರಾತಿ, ಹರಿಜನ ಸೇವಕ ಹಿಂದಿ. ಅವರು ಬರೆದ ಪತ್ರಗಳು, ಪುಸ್ತಕಗಳು, ಮಾಡಿದ ಭಾಷಣಗಳು, ಮತ್ತು ಎಲ್ಲಾ ಲೇಖನಗಳು ಸೇರಿದರೆ ಸುಮಾರು ೧೦ ಸಾವಿರ ಪುಟ ಆಗಬಹುದು ಅಂತ ಅವರ ಕೃತಿಗಳ ಡಿಜಿಟಲೀಕರಣ ಮಾಡುತ್ತಿರುವ ʻಗಾಂಧಿ ಹೆರಿಟೇಜ ಪೋರ್ಟಲ್ʼ ನಲ್ಲಿ ದಾಖಲಾಗಿದೆ. ಕೆಲವು ಪತ್ರಿಕೆಗಳಿಗೆ ಅವರೇ ಲೇಖನ ಕಳಿಸಿದರು, ಇನ್ನು ಅನೇಕರು ಸಿಂಡಿಕೇಷನ್ ಶೈಲಿಯಲ್ಲಿ ಅವರ ಬರಹಗಳನ್ನ ಬಳಸಿಕೊಂಡರು.
ನಾವೂ ಪತ್ರಕರ್ತರು, ಅವರೂ ಪತ್ರಕರ್ತರು ಅಂದುಕೊಂಡು ಬೀಗುವ ಮೊದಲು ಅವರಿಗೂ ನಮಗೂ ಇರುವ ಸಾಮ್ಯವನ್ನು ಹಾಗೂ ವ್ಯತ್ಯಾಸವನ್ನು, ನೋಡೋಣ.
ಅವರು ಪತ್ರಕರ್ತರಾಗಿದ್ದರು, ತಮ್ಮ ಕಾಲದ ಆಗುಹೋಗುಗಳಿಗೆ ಸ್ಪಂದಿಸುತ್ತಿದ್ದರು ಅನ್ನುವುದು ನಮಗೂ ಅವರಿಗೂ ಇರುವ ಸಾಮ್ಯವನ್ನು ತೋರುತ್ತದೆ.
ಇನ್ನು ಅವರಿಗೂ ನಮಗೂ ಇರುವ ವ್ಯತ್ಯಾಸಗಳನ್ನು ನೋಡಿದರೆ, ಆ ಪಟ್ಟಿ ದೊಡ್ಡದಾಗುತ್ತದೆ. ಅವರಿಗೆ ಪತ್ರಿಕೋದ್ಯಮ ಯಾವತ್ತೂ ವೃತ್ತಿಯಾಗಿರಲಿಲ್ಲ. ಅದು ಅವರಿಗೆ ಜನರಿಗೆ ಸಂದೇಶ ಕಳಿಸುವ ಮಾಧ್ಯಮವಾಗಿತ್ತು. ಅವರು ಜನಾಭಿಪ್ರಾಯ ರೂಪಿಸಲು, ಹೋರಾಟದ ಮನೋಭೂಮಿಕೆ ತಯಾರು ಮಾಡಲು, ದನಿ ಇಲ್ಲದವರ ದನಿಯಾಗಿಸಲು, ಬ್ರಿಟಿಷರ ತಪ್ಪುಗಳನ್ನು ಅವರದೇ ಭಾಷೆಯಲ್ಲಿ ಎತ್ತಿ ತೋರಿಸಲು, ಪತ್ರಿಕೆಗಳನ್ನು ಬಳಸಿಕೊಂಡರು.
ನಮ್ಮ ತಲೆಮಾರಿನ ಪತ್ರಕರ್ತರು ಸುದ್ದಿಮನೆಗಳಲ್ಲಿ ಕೆಲಸ ಮಾಡುವುದು ಸರಾಸರಿ ಕೇವಲ ೨೦ ವರ್ಷ ಅಂತ ಅಮೇರಿಕೆಯ ಒಂದು ಅಧ್ಯಯನ ಹೇಳಿದೆ. ಅದಕ್ಕೆ ಮುಖ್ಯ ಕಾರಣ ಒಂದೇ ಕೆಲಸ ಮಾಡಿ ಬೇಸರವಾಗುತ್ತದೆ ಎನ್ನುವುದು ಇದಕ್ಕೆ ಮುಖ್ಯ ಕಾರಣವಂತೆ. ನಮ್ಮ ದೇಶದಲ್ಲಿ ಇದಕ್ಕೆ ಬೇರೆ ಕಾರಣಗಳು ಇರಬಹುದು. ನಮಗಿಂತ ಕಿರಿಯ ವಯಸ್ಸಿನ ಹುಷಾರು ಪತ್ರಕರ್ತರೊಬ್ಬರು ಐ ವಾಂಟ್ ಮೈ ಇವನಿಂಗ್ಸ್ ನನಗೆ ನನ್ನ ಸಂಜೆಗಳನ್ನು ಕಳೆದುಕೊಳ್ಳಲಿಕ್ಕೆ ಇಷ್ಟ ಇಲ್ಲ ಅಂತ ಹೇಳಿ ಕೆಲಸ ಬಿಟ್ಟರು. ಆದರೆ ಅವರು ಅದರ ಬದಲಾಗಿ ರಾತ್ರಿಪಾಳಿಯ ಕಾಲ ಸೆಂಟರಿನಲ್ಲಿ ಕೆಲಸ ಮಾಡಬೇಕಾಯಿತು.
ಈ ಲೆಕ್ಕದಲ್ಲಿ ಗಾಂಧಿ ಎರಡು ಪಟ್ಟು ಸಮಯವನ್ನು ಪತ್ರಿಕೋದ್ಯಮದಲ್ಲಿ ಕಳೆದರು. ಅವರಿಗೆ ಬೇಸರ ಬರದ ಕಾರಣ ಏನೆಂದರೆ ಅವರು ಜನರಿಗೆ ಸಂಬಂಧ ಪಟ್ಟ ವಿಷಯಗಳ ಬಗ್ಗೆ ಬರೆದರು. ಜನ ಪತ್ರಿಕೆಗಳಿಂದ ದೂರ ಹೋಗುತ್ತಿದ್ದಾರೆ. ಅದಕ್ಕೆ ಕಾರಣ ಡಿಜಿಟಲ್ ಮಾಧ್ಯಮ ಅಂತ ನಾವು ಹೇಳಿಕೊಂಡು ಅಡ್ಡಾಡುತ್ತಿದ್ದೇವೆ. ಆದರೆ ಅದಕ್ಕೆ ಕಾರಣ ಮಾಧ್ಯಮದ ರೂಪವಲ್ಲ. ಫೊನಿನ ಸೆಳೆತದಿಂದ ಜನ ಕಾಗದದಿಂದ ದೂರ ಹೋಗುತ್ತಿಲ್ಲ. ಜನಪರ ವಿಷಯಗಳನ್ನು ನಾವು ಬರೆಯದೇ ಹೋದದ್ದಕ್ಕೆ ಅವರು ನಮ್ಮನ್ನು ದೂರ ಮಾಡುತ್ತಿದ್ದಾರೆ ಅಂತ ನನ್ನ ತರ್ಕ.
ಅವರು ಪತ್ರಿಕೆಯನ್ನು ಸಂದೇಶವಾಹಕವಾಗಿ ಬಳಕೆ ಮಾಡಿದರು. –
ಇಲ್ಲಿ ಒಂದು ಮಾತು ನೆನಪಾಗುತ್ತದೆ. ಗಾಂಧಿ ಅವರು ಗೋಪಾಲ ಕೃಷ್ಣ ಗೋಖಲೆ ಅವರನ್ನು ಮೊದಲ ಸಾರಿ ಭೇಟಿ ಆದಾಗ ಒಂದು ಪ್ರಶ್ನೆ ಕೇಳುತ್ತಾರೆ. ʻʻಭಾರತಕ್ಕೆ ಸ್ವಾತಂತ್ರ್ಯ ಕೊಡಿ ಅಂತ ನೀವು ಪದೇ ಪದೇ ಇಂಗ್ಲಂಡಿನ ರಾಣಿಗೆ ಪತ್ರ ಬರೀತಾ ಇರತೀರಲ್ಲಾ, ಅದರಿಂದ ಏನು ಉಪಯೋಗ? ಅವರ ಮನಸ್ಸಂತೂ ನಿಮ್ಮ ಪತ್ರಗಳನ್ನು ಓದಿ ಬದಲಾಗುವುದಿಲ್ಲʼʼ. ಆಗ ಅವರು ಅಯ್ಯೋ. ನಾನು ಅವರಿಗೋಸ್ಕರ ಅಂತ ಎಲ್ಲಿ ಪತ್ರ ಬರೀತೇನೆ? ಪತ್ರ ಅವರಿಗೆ ಬರೆದದ್ದಾದರೂ ಅದನ್ನು ನಮ್ಮ ಜನ ಓದಲಿ, ಅವರಲ್ಲಿ ಜಾಗೃತಿ ಮೂಡಲಿ ಅಂತ ಬರೆಯುತ್ತೇನೆ. ಪ್ರತಿ ಬಾರಿ ಪತ್ರ ಬರೆದಾಗಲೂ ಅವರು ಮಾಡುತ್ತಿರುವ ಅನ್ಯಾಯವನ್ನು ಅದರಲ್ಲಿ ಸವಿವರವಾಗಿ ಹೇಳಿರುತ್ತೇನೆ. ಅದನ್ನುಓದಿದವರಿಗೆ ಅದು ತಿಳಿದು, ಬ್ರಿಟಿಷ ಸರಕಾರದ ದುರಾಡಳಿತದ ಬಗ್ಗೆ ನಮ್ಮ ಜನರಿಗೆ ಗೊತ್ತಾಗಲಿ ಅಂತಲೇ ಸಾಲು ಸಾಲು ಪತ್ರಗಳನ್ನು ಬರೆಯುತ್ತೇನೆ. ಅವುಗಳನ್ನು ಪತ್ರಿಕೆಗಳಲ್ಲಿ ಪ್ರಕಟ ಮಾಡುತ್ತೇನೆ,ʼʼ ಅಂತ ಹೇಳುತ್ತಾರೆ.
ಇದರ ಹಿನ್ನೆಲೆ ಮಜವಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರ ಸಂಘಟನೆ ಮಾಡುತ್ತಿದ್ದ ಮೋಹನದಾಸ ಅವರನ್ನು ಭಾರತಕ್ಕೆ ಕರೆ ತರಲು ಗೋಪಾಲ ಕೃಷ್ಣ ಗೋಖಲೆ ಅವರು ದೀನಬಂಧು ಚಾರ್ಲ್ಸ್ ಆಂಡ್ರೂಸ್ ಅವರನ್ನು ಕಳಿಸಿಕೊಡುತ್ತಾರೆ. ಅವರು ನತಾಲಿನಲ್ಲಿ ವಕೀಲಕಿ ನಡೆಸುತ್ತಿದ್ದ ಮೋಹನದಾಸ ಅವರನ್ನು ಹುಡುಕಿಕೊಂಡು ಹೋಗಿ ಪರಿಚಯ ಮಾಡಿಕೊಳ್ಳುತ್ತಾರೆ. ಅವರ ಸ್ನೇಹ ಗಟ್ಟಿಯಾಗುತ್ತದೆ. ಚಾರ್ಲೀ ಅವರು ಗಾಂಧಿ ಅವರನ್ನು ಕರೆದುಕೊಂಡು ಬಂದು ಗೋಖಲೆ ಅವರಿಗೆ ಪರಿಚಯ ಮಾಡಿಸುತ್ತಾರೆ.
ಆಂಡ್ರೂಸ್ ಹಾಗೂ ಗಾಂಧಿ ಅವರ ಸ್ನೇಹದ ಬಗ್ಗೆ ಒಂದು ಮಾತು. ರವೀಂದ್ರನಾಥ ಟಾಗೋರ್ ಅವರು ಗಾಂಧಿ ಅವರಿಗೆ ಮಹಾತ್ಮಾ ಅಂತ ಕರೆದಾಗ ಅದು ಇವರಿಗೆ ಬಿರುದಿನಂತೆ ಅಂಟಿಕೊಳ್ಳುತ್ತದೆ. ಅದರ ಬಗ್ಗೆ ಅವರನ್ನ ಕೇಳಿದಾಗ ಅವರು ʻʻಚಾರ್ಲೀ ನನ್ನನ್ನು ಮೋಹನ ಅಂತ ಕರೀತಾನೆ. ಹಾಗೆ ಯಾರಾದರೂ ನನ್ನನ್ನ ಕರೆಯೋದು ನನಗೆ ಇಷ್ಟʼʼ ಅಂತ ಹೇಳುತ್ತಾರೆ. ಚರ್ಚಿನ ಪಾದ್ರಿ ಆಗಿದ್ದ ಆಂಡ್ರೂಸ್ ಅವರು ಪೂರ್ವ ಏಷಿಯಾಕ್ಕೆ ವರ್ಗ ವಾಗಿ ಹೋಗುವ ವರೆಗೂ ಅವರು ಅಣ್ಣ ತಮ್ಮಂದಿರಂತೆ ಇರುತ್ತಾರೆ. ಕೊನೆಯ ವರೆಗೂ ಒಬ್ಬರನ್ನೊಬ್ಬರು ಏಕವಚನದಲ್ಲಿ ಮಾತಾಡಿಸುತ್ತಾ ಇದ್ದರು. ಇದನ್ನು ಯಾಕೆ ಹೇಳುತ್ತಾ ಇದ್ದೇನೆ ಎಂದರೆ ಗಾಂಧಿ ಅನ್ನುವವರು ಅಸಾಮಾನ್ಯರು, ಭಗವಂತನ ಅವತಾರ, ಸುಪರಮ್ಯಾನನ ಚಿಕ್ಕಪ್ಪನ ಮಗ ಅಂತ ಕೆಲವರು ಆರಾಧಿಸುವುದಕ್ಕೂ, ಅವರಿಗೆ ದೇವಸ್ಥಾನ ಕಟ್ಟುವುದಕ್ಕೂ ಇನ್ನು ಒಬ್ಬ ಹುಲು ಮಾನವ ಇಷ್ಟು ಒಳ್ಳೆಯವ ಆಗಿರಲಿಕ್ಕೆ ಸಾಧ್ಯವೇ ಇಲ್ಲ. ಅವರಲ್ಲಿ ಸಾವಿರ ಐಬು ಇದ್ದಿರಬೇಕು ಅಂತ ಕೆಲವರು ವಿರೋಧಿಸುವುದಕ್ಕೂ ಇದು ಉತ್ತರ ಕೊಡುತ್ತದೆ.
ಗುಜರಾತು- ರಾಜಸ್ಥಾನಿನ ಗಡಿ ಹಳ್ಳಿಯಲ್ಲಿ ಕೆಲವರು ಗಾಂಧಿಗೆ ಮಹಾತ್ಮಾ ಮಂದಿರ ಎಂಬ ಗುಡಿ ಕಟ್ಟಲು ಹೊರಟಾಗ ಇವರು ಅವರಿಗೆ ಪತ್ರಿಕೆಯಲ್ಲಿ ಒಂದು ಲೇಖನ ಬರೆಯುತ್ತಾರೆ. ʻʻಇದನ್ನು ನಿಲ್ಲಿಸಿ. ಇದು ಸರ್ವಶಕ್ತ ದೇವರಿಗೆ ಮಾಡುವ ಅವಮಾನ ಹಾಗೂ ನನ್ನಂಥವನಿಗೆ ಅತೀವ ಮುಜುಗರ ಉಂಟು ಮಾಡುವ ಸಂಗತಿ. ಇದರಿಂದ ಯಾವುದೇ ಉಪಯೋಗ ವಿಲ್ಲ. ಇದರ ಬದಲಾಗಿ ನಿಮ್ಮ ಊರಿನ ಬಡವರಿಗೆ ಶಾಲೆ ಅಥವಾ ಆಸ್ಪತ್ರೆ ಕಟ್ಟಿಸಿ. ನಾನಂತೂ ಆ ಸ್ಥಳಕ್ಕೆ ಎಂದಿಗೂ ಭೇಟಿ ನೀಡುವುದಿಲ್ಲʼʼ.
ಗಾಂಧಿ ಪತ್ರಕರ್ತರಾಗಿದ್ದಕ್ಕೆ ಅನೇಕ ಆಯಾಮಗಳಿವೆ. ಅವುಗಳಲ್ಲಿ ಕೆಲವನ್ನು ಮಾತ್ರ ನೋಡೊಣ.
ಮೊದಲನೇಯದು – ಧೈರ್ಯ
ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದ ಸರಕಾರ ನಾಗರಿಕತೆಯ ಕಾಯಿದೆ (ಎಷಿಯಾದವರ ನೋಂದಣಿ ಕಾಯಿದೆ) ತಂದಾಗ ಅದನ್ನು ವಿರೋಧಿಸಿದ ಗಾಂಧಿ ಬರೆದ ಮಾತುಗಳನ್ನು ಇಲ್ಲಿ ಗಮನಿಸೋಣ. ʻʻಭಾರತೀಯರು, ಚೀನಾ ಮೂಲದವರು ಮುಂತಾದ ಏಷಿಯಾದವರ ನಾಗರಿಕತೆಯನ್ನು ಈ ಕಾಯಿದೆ ಪ್ರಶ್ನಿಸುತ್ತದೆ. ದಶಕಗಳಿಂದ ಇಲ್ಲಿ ನೆಲೆಸಿ ಇಲ್ಲಿ ದುಡಿದು, ಮನೆ ಮಕ್ಕಳು, ಮೊಮ್ಮಕ್ಕಳನ್ನು ಕಂಡ, ಈ ದೇಶದ ಪ್ರಗತಿಯಲ್ಲಿ ಭಾಗಿಯಾದವರನ್ನೂ ಸಹಿತ ಈ ಕಾಯಿದೆ ಸಂಶಯದಿಂದ ನೋಡುತ್ತದೆ. ಪುರುಷರು ನೋಂದಣಿ ಮಾಡಿಸಿಕೊಳ್ಳದಿದ್ದರೆ ಅವರು ನಾಗರಿಕರಲ್ಲ ಎಂದು ಹೊರಗೆ ಹಾಕಲಾಗುತ್ತದೆ. ಅವರ ಹೆಂಡಂದಿರನ್ನು ವೇಶ್ಯೆಯರು ಎಂದು ಭಾವಿಸಲಾಗುತ್ತಿದೆ. ಈಶ್ವರ ಸೃಷ್ಟಿಯ ಈ ಜಗತ್ತಿನಲ್ಲಿ ಇದು ಸಲ್ಲದು. ನಾಗರಿಕ ಜಗತ್ತಿನ ಯಾವುದೇ ದೇಶ ಈ ರೀತಿ ನಡೆದುಕೊಳ್ಳುವುದು ಸಾಧ್ಯವಿಲ್ಲ. ಸಾಧ್ಯವಾಗಲೂ ಬಾರದು,ʼʼ. ಈ ಮಾತನ್ನು ಅಲ್ಲಿನ ಮಿಲಿಟರಿ ಸರಕಾರದ ವಿರುದ್ಧ ಅವರು ಹೇಳಿದರು. ಹೇಳಿ ಜೀವಂತ ಉಳಿದರು.
ಕೇವಲ ಪತ್ರಿಕೆ ಕಚೇರಿಯ ಕೆಲಸಕ್ಕೆ ಸೀಮಿತವಾಗದೇ ಬೀದಿಗೆ ಇಳಿದರು, ಹೋರಾಟ ಮಾಡಿದರು, ಭಾರತೀಯರನ್ನು ಸಂಘಟಿಸಿ, ಅಧಿಕಾರಿಗಳ ಮುಂದೆ, ಬಹಿರಂಗ ಸಭೆಯಲ್ಲಿ ನಾಗರಿಕತೆಯ ದಾಖಲೆಗಳನ್ನು ಬೆಂಕಿಗೆ ಹಾಕಿದರು. ಆ ನಂತರ ಜೈಲಿಗೆ ಹೋದರು, ಲಾಠಿ ಏಟು ತಿಂದರು, ಅದು ಬೇರೆ ವಿಷಯ. ಆದರೆ ಪತ್ರಕರ್ತರಾಗಿ ಸೇನಾಧಿಕಾರಿಗಳ ವರ್ಣಬೇಧ ನೀತಿಯ ವಿರುದ್ಧ ಬರೆದರು. ನಾನು ಹೊರಗಿನವನು. ನನಗ್ಯಾಕೆ ಇಲ್ಲಿಯ ಉಸಾಬರಿ ಅಂತ ಸುಮ್ಮನಿರಲಿಲ್ಲ. ಅಲ್ಲಿಂದ ಹೊರಟು ಬರಲಿಲ್ಲ.
ಅಧಿಕಾರದ ಮುಖಕ್ಕೆ ಎದುರು ಮಾತನಾಡುವುದು ಅವರಿಗೆ ಸಿದ್ಧಿಸಿತ್ತು. ಅಸಹಾರ ಚಳುವಳಿಯಲ್ಲಿ ಅವರು ಬರೆದ ಸಂಪಾದಕೀಯ ಹೀಗಿದೆ. ʻʻನೀವು ಭಾರತೀಯರನ್ನು ನಡೆಸಿಕೊಳ್ಳುತ್ತಿರುವ ರೀತಿ ಅನಾಗರಿಕವಾದದ್ದು. ನಮ್ಮ ಕನಿಷ್ಟ ಮಾನವ ಹಕ್ಕುಗಳನ್ನು ನೀವು ಕಿತ್ತು ಕೊಳ್ಳುತ್ತಿದ್ದೀರಿ. ಮೃಗಗಳ ಜೀವನ ನಮ್ಮದಾಗಿದೆ. ಒಂದೇ ತಾಯಿಯ ಮಕ್ಕಳಾದ ನಮ್ಮನ್ನು ನೀವು ಬೇರೆಯಾಗಿಸಿದ್ದೀರಿ. ನೀವು ಮಾಡುತ್ತಿರುವುದು ಬರೀ ತಪ್ಪಲ್ಲ. ಘೋರ ಪಾಪದ ಕೆಲಸ. ಇಡೀ ಜಗತ್ತಿನಾದ್ಯಂತ ಮಾಧ್ಯಮಗಳು ನಿಮ್ಮನ್ನು ಟೀಕಿಸುತ್ತಿವೆ. ಆದರೆ ಅದು ನಿಮ್ಮನ್ನು ತಾಕುತ್ತಿಲ್ಲ. ನಿಮ್ಮ ದಂತ ಗೋಪುರದಲ್ಲಿ ನೀವು ಇದ್ದೀರಿ. ಆದರೆ ನಿಮ್ಮ ತಪ್ಪುಗಳು ನಿಮಗೇ ತೋಚಬೇಕು. ಇಲ್ಲದಿದ್ದಲ್ಲಿ ಅವುಗಳ ವ್ಯಾಪ್ತಿ ನಿಮಗೆ ಗೊತ್ತಾಗಲಾರದುʼʼ.
ಅಂದಿನ ಸುಪ್ರೀಂ ಕೋರ್ಟು ಇವರಿಗೆ ಜೈಲು ಹಾಗೂ ದಂಡ ಎರಡೂ ವಿಧಿಸಿದಾಗ ಅವರು ಈ ನಿರ್ಣಯ ತಪ್ಪು. ಇದನ್ನು ನಾನು ಒಪ್ಪುವಿದಿಲ್ಲ. ದಂಡ ಕೊಡುವುದಿಲ್ಲ. ಜೈಲಿಗೂ ಹೋಗುವುದಿಲ್ಲ. ಬಲವಂತವಾಗಿ ಹಾಕಿದರೆ ಆಮರಣ ಉಪವಾಸ ಮಾಡುತ್ತೇನೆ. ನಂತರ ಅವರನ್ನು ಎರಡೂ ಶಿಕ್ಷೆಗಳಿಂದ ಮುಕ್ತ ಮಾಡಲಾಯಿತು. ಸೂರ್ಯ ಮುಳುಗದ ನಾಡಿನ ಇಡೀ ಶಕ್ತಿ ಒಂದು ಕಡೆ ಆಗಿ, ಇನ್ನೊಂದು ಕಡೆ ನೈತಿಕ ಧೈರ್ಯ ವೊಂದನ್ನು ಬಿಟ್ಟು ಏನೂ ಇಲ್ಲದ ಮನುಷ್ಯ ಹೀಗೆ ನಡೆದುಕೊಂಡ. ಈ ಶಕ್ತಿ ಯ ಕುರುಹಾದರೂ ನಮ್ಮ ಬಳಿ ಉಳಿದಿದೆಯೇ?
ನಿರ್ಲಿಪ್ತತೆ
ಬ್ರಿಟಿಷರನ್ನು ಜೀವನ ಪರ್ಯಂತ ವಿರೋಧಿಸಿದ ಗಾಂಧಿ ೧೯೩೨ ರಲ್ಲಿ ಪಕ್ಷ ರಾಜಕೀಯ ದಿಂದ ಸನ್ಯಾಸ ತೆಗೆದುಕೊಳ್ಳುತ್ತಾರೆ. ನಾನು ಇನ್ನು ಮೇಲೆ ಕಾಂಗ್ರೆಸ್ಸಿನ ನಾಕಾಣೆ ಸದಸ್ಯನಲ್ಲ ಅಂತ ಘೋಷಿಸಿದರು. ಆ ನಂತರದ ಅವರ ಬರವಣಿಗೆಗಳನ್ನು ಗಮನಿಸಿದರೆ ಅವರು ಯಾರ ಪಕ್ಷಪಾತಿಯೂ ಆಗಿರಲಿಲ್ಲ ಅನ್ನುವುದು ಸ್ಪಷ್ಟವಾಗುತ್ತದೆ. ಅದರಲ್ಲೂ ವಿಶೇಷವಾಗಿ ೧೯೩೫ರ ನಂತರ ರಾಜ್ಯಗಳಲ್ಲಿ ಕಾಂಗ್ರೆಸ್ಸು ಅಧಿಕಾರಕ್ಕೆ ಬಂದ ಮೇಲೆ ಅವರು ಆ ಪಕ್ಷ ಹಾಗೂ ಅವರ ಆಡಳಿತವನ್ನು ತೀವ್ರವಾಗಿ ಟೀಕಿಸಿದರು. ಕೇವಲ ಆರ್ಥಿಕ ಬೆಳವಣಿಗೆಗೆ ಪಕ್ಷದ ಕಾರ್ಯಸೂಚಿಯನ್ನು ಸೀಮಿತ ಗೊಳಿಸುವುದರಿಂದ ಯಾವ ಸಾಧನೆಯೂ ಆಗಲಾರದು. ಸಾಮಾಜಿಕ ಬೆಳವಣಿಗೆ, ಸಮ ಸಮಾಜದ ನಿರ್ಮಾಣ ನಮ್ಮ ಮುಂದಿರಬೇಕಾದ ಧ್ಯೇಯ. ಆ ದಿಕ್ಕಿನಲ್ಲಿ ಕೆಲಸ ಮಾಡದ ಯಾವ ರಾಜಕೀಯ ಆಂದೋಲನವೂ ತನ್ನ ಗುರಿಯಿಂದ ದೂರ ಸರಿದಂತೆ ಎಂದು ಟೀಕಿಸಿದರು. ಸರ್ವೋದಯಕ್ಕೆ, ಅಸ್ಪಶ್ರ್ಯತೆ ನಿವಾರಣೆಗೆ, ಮಹಿಳಾ ಸಶಕ್ತೀಕರಣಕ್ಕೆ, ಹಿಂದುಳಿದ ವರ್ಗದವರ ಕಲ್ಯಾಣಕ್ಕೆ ಬೆಂಬಲ ಸೂಚಿಸುವ ಯಾವ ರಾಜಕೀಯ ಹೋರಾಟಕ್ಕೂ ತನ್ನ ಬೆಂಬಲ ಇಲ್ಲ ಎಂದು ಸಾರಿದರು.
ಇದು ತುಂಬ ಮುಖ್ಯವಾದದ್ದು. ನಮ್ಮವರು ಏನು ಮಾಡಿದರೂ ಸರಿ, ವಿರೋಧಿಗಳು, ನಮ್ಮ ಸಿದ್ಧಾಂತಕ್ಕೆ ಒಗ್ಗದವರು ಏನು ಮಾಡಿದರೂ ತಪ್ಪು ಎನ್ನುವ ಧೋರಣೆ ನಮ್ಮನ್ನು ಸಂಕುಚಿತವಾಗಿಸುತ್ತಿದೆ. ನಾವು ಇತರರಲ್ಲಿನ ಒಳ್ಳೆಯಗುಣಗಳನ್ನು ಕಂಡಷ್ಟೇ ನಿರ್ಮಲ ಮನಸ್ಸಿನಿಂದ ನಮ್ಮವರ ತಪ್ಪುಗಳನ್ನು ಎತ್ತಿ ತೋರಿಸಲು ಸಾಧ್ಯವಾದರೆ ಅದೇ ಸಮತೂಕದ ಪತ್ರಿಕೋದ್ಯಮ.
ಇಂದು ಸಮಾನಾಂತರ ದೂರದ ವರದಿಗಾರಿಕೆ ಕಮ್ಮಿಯಾಗಿದೆ. ಇವರು ನಮ್ಮವರು ಅವರು ಇತರರು ಎನ್ನುವ ವಿಚಾರ- ನಡವಳಿಕೆ ಇಬ್ಬಗೆಯ ಪತ್ರಕರ್ತರಲ್ಲಿ ಕಂಡು ಬರುತ್ತಿದೆ. ಇದರಿಂದ
ನಾವು ಅವರು ಅನ್ನುವ ಭ್ರಮಾ ಪತ್ರಿಕೋದ್ಯಮ ಸಹಜ ವಾಗಿದೆ. ನಮ್ಮ ಸಮಾಜದ ಸ್ವಾಸ್ಥಕ್ಕೆ, ಪ್ರಜಾಸತ್ತೆಯ ವಿಕಾಸಕ್ಕೆ ಇದು ಬಹಳ ಅಪಾಯಕಾರಿ.
ಕೆಲವು ದಶಕಗಳ ಹಿಂದೆ ಈ ಸಿದ್ಧಾಂತದವರು ಹೀಗೆ, ಆ ಸಿದ್ಧಾಂತದವರು ಹಾಗೆ. ಬಲಪಂಥೀಯರು ಹೀಗಂದರೆ ಎಡಪಂಥೀಯರು ಹಾಗೆನ್ನುತ್ತಾರೆ ಎನ್ನುವ ಮಾತುಗಳನ್ನು ಆಡುತ್ತಿದ್ದ ನಾವು ಈಗ ಇವರು ಸರಿ, ಅವರು ತಪ್ಪು ಎನ್ನುವ ತೀರ್ಮಾನ ರೂಪಿ ಮಾತುಗಳನ್ನು ಆಡುತ್ತಿದ್ದೇವೆ. ಕೇವಲ ಕೆಲವು ಶತಮಾನಗಳಲ್ಲಿ ಯಾವುದೇ ಸಿದ್ಧಾಂತದ ಸರಿ ತಪ್ಪುಗಳು ಸಾಬೀತು ಆಗುವುದಿಲ್ಲ. ಇವುಗಳನ್ನು ಸಂಪೂರ್ಣವಾಗಿ ಒಪ್ಪುವ ಅಥವಾ ತಿರಸ್ಕರಿಸುವ ಹಕ್ಕು ಮಾಧ್ಯಮಕ್ಕೆ ಇಲ್ಲ ಎನ್ನುವ ತರ್ಕವನ್ನೂ ಮೀರಿ ನಾವು ಪಕ್ಷಪಾತಿಗಳಾಗುತ್ತಿದ್ದೇವೆ. ಮಾನವ ಕುಲ ಹೇಗೆ ವಿಕಾಸ ಗೊಳ್ಳುತ್ತಿದೆಯೋ ಹಾಗೆಯೇ ಸಿದ್ಧಾಂತಗಳೂ ಕೂಡ ವಿಕಾಸ ಗೊಳ್ಳುತ್ತಿವೆ. ಅವುಗಳ ಪರಿಪೂರ್ಣತೆ ಯ ಬಗ್ಗೆ ಷರಾ ಬರೆಯುವ ಅಗತ್ಯ ಈಗಂತೂ ಇಲ್ಲ.
ಈ ಹಿನ್ನೆಲೆಯಲ್ಲಿಯೇ ಗಾಂಧಿ ತನ್ನ ಜೀವನ ಕಥೆಗೆ ʻʻಸತ್ಯದೊಂದಿಗೆ ನನ್ನ ಪ್ರಯೋಗಗಳುʼʼ ಅನ್ನುವ ಹೆಸರು ಹುಡುಕಿಕೊಂಡಿದ್ದು ನನಗೆ ಸಮಪರ್ಕ ವಾದ ನಡೆ ಅನ್ನಿಸುತ್ತದೆ. ಅವರು ಸತ್ಯದೊಂದಿಗೆ ಪ್ರಯೋಗ ಮಾಡಬಹುದಾದರೆ ನಾವೇಕೆ ಸಿದ್ಧಾಂತಗಳೊಡನೆಯ ಪ್ರಯೋಗಗಳನ್ನು ಅರ್ಧದಲ್ಲಿ ಕೈ ಬಿಡಬೇಕು?
ಸಾಂತ್ವನ
ಬೇರೆಯವರ ವಿಷಯ ಹಾಗಿರಲಿ, ನಮ್ಮವರೇ ನಮ್ಮ ಪರವಾಗಿ ಮಾತಾಡುತ್ತಿಲ್ಲ. ದೇಶಾದ್ಯಂತ ಪತ್ರಕರ್ತರ ಕೊಲೆ, ಅಪಹರಣ, ಕೊಲೆ ಬೆದರಿಕೆ, ಅವರ ಮೇಲೆ ಸುಳ್ಳು ಕೇಸು, ರಾಜದ್ರೋಹದ ಪ್ರಕರಣ ದಾಖಲಾಗುತ್ತಿದ್ದರೂ ಸಹ ನಮ್ಮಲ್ಲಿ ಅನೇಕರು ಸುಮ್ಮನಿದ್ದೇವೆ. ಜಿಲ್ಲಾ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಅನೇಕ ಪತ್ರಕರ್ತರ ಸಂಘಟನೆಗಳು ಇವೆ. ತಮ್ಮ ಪಾಡಿಗೆ ತಮ್ಮ ಕೆಲಸ ತಾವು ಮಾಡಿದ
ರಾಜ್ಯದ ಮೂರು ಪತ್ರಕರ್ತರ ವಿರುದ್ಧ ಗಂಭೀರ ಪ್ರಕರಣಗಳು ಕಳೆದ ಎರಡು ವರ್ಷದಲ್ಲಿ ದಲ್ಲಿ ದಾಖಲಾಗಿವೆ. ಆದರೆ ಇಂತಹ ಚಾಳಿಗೆ ನಾವು ಎಷ್ಟು ವಿರೋಧ ಮಾಡಬೇಕಿತ್ತೋ ಅಷ್ಟು ಮಾಡಿಲ್ಲ.
ಅದಕ್ಕೆ ಕಾರಣ ಅಂದರ ʻಸಧ್ಯ ನಮ್ಮ ತನಕಾ ಬಂದಿಲ್ಲವಲ್ಲ ಅನ್ನುವ ಮನೋಭಾವ. ʻಮನುಷ್ಯ ಜಾತಿ ತಾನೊಂದೇ ವಲಂ ಅಂದರೆ ಅಲ್ಲವೇ ಅಲ್ಲಂʼ ಅನ್ನುವ ಮನಸ್ಥಿತಿಯಲ್ಲಿ ನಾವಿದ್ದೇವೆ. ಈ ಕಾಲದಲ್ಲಿ ಲಿಯೋ ಟಾಲಸ್ಟಾಯ್ ಅವರ `ಕಡೆಗಣಿಸಿದ ಕಿಡಿ ಮನೆಯನ್ನೇ ಸುಟ್ಟೀತು’ ಎನ್ನುವ ಮಾತನ್ನು ಮಾತನ್ನು ಮರೆಯುತ್ತೇವೆ.
ಸರಳ ಭಾಷೆ
ಇದೇ ಮೈಸೂರು ವಿಶ್ವವಿದ್ಯಾಲಯದಲ್ಲಿ ಹಿಂದೊಮ್ಮೆ ಪೂರ್ಣ ಚಂದ್ರ ತೇಜಸ್ವಿಯವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲು ಬಂದಿದ್ದರು. ಅವರಿಗೆ ಒಬ್ಬರು ಹೀಗೇನೋ ಪ್ರಶ್ನೆ ಕೇಳಿದರು. ʻʻಸಮಕಾಲೀನ ಜಾಗತಿಕ ಸನ್ನಿವೇಶದಲ್ಲಿ, ನವ್ಯೋತ್ತರ ವಸಾಹತು ಶಾಹಿಯ ಪ್ರಭಾವದಿಂದ ಹಿರಿ ಸಂಸ್ಕೃತಿ ಕಿರಿ ಸಂಸ್ಕೃತಿಯ ಮೇಲೆ ಸವಾರಿ ಮಾಡುತ್ತಿರುವುದರಿಂದ ಸಮ ಸಂಸ್ಕೃತಿಯ ಅಸ್ತಿತ್ವಕ್ಕೆ ಸಾಧ್ಯತೆ ಇದೆಯೇ?ʼʼಅಂತ. ಅವರು ಪ್ರಶ್ನೆ ಅರ್ಥ ಆಗಲಿಲ್ಲ. ನೀವು ಕನ್ನಡದಲ್ಲಿ ಕೇಳಿದರೆ ಹೇಳಬಹುದು ಅಂತ ಅಂದರು. ಇದನ್ನು ಯಾಕೆ ಹೇಳುತ್ತೇನೆ ಎಂದರೆ ನಾವೆಲ್ಲ ಹೆಚ್ಚು ಶಿಕ್ಷಣ, ಅನುಭವ ದೊರೆಯುತ್ತಿದ್ದಂತೆಯೇ ಸರಳ ಭಾಷೆಯಿಂದ ದೂರ ಸರಿಯುತ್ತಿದ್ದೇವೆ. ಸಂಕೀರ್ಣ ಭಾಷೆ ಬಳಸಿದರೇ ನಾವು ಬುದ್ಧಿವಂತರು ಅಂತ ಅಂದುಕೊಂಡಿದ್ದೇವೆ.
ಕೇವಲ ವಿಶ್ವವಿದ್ಯಾಲಯಗಳು ಅಥವಾ ಸಂಶೋಧನಾ ಕೇಂದ್ರಗಳಿಗೆ ಸೀಮಿತವಾಗಿರುತ್ತಿದ್ದ ಈ ಕ್ಲಿಷ್ಟ ಭಾಷೆ ಬಳಕೆಯ ಚಾಳಿ ಈಗೀಗ ಮಾಧ್ಯಮಕ್ಕೆ ಅಂಟಿಕೊಳ್ಳುತ್ತಿದೆ. ಉದಾಹರಣೆಗೆ ವಾರ್ಷಿಕ ಆಯವ್ಯಯ ದ ಮರುದಿನ ಪತ್ರಿಕೆಯನ್ನು ಎಷ್ಟು ಜನ ಓದಿ ಅರ್ಥಮಾಡಿಕೊಳ್ಳುತ್ತಾರೆ? ಅವರಿಗೆ ಅರ್ಥವಾಗುವಂತೆ ನಾವು ಬರೆಯುತ್ತಿದ್ದೇವೆಯೇ? ಸಚಿವರು ಬಳಸಿದ ಕಠಿಣ ಪದಗಳನ್ನೇ ನಾವು ಬಳಸುವುದಾದರೆ ಪತ್ರಿಕೆ ಎನ್ನುವ ಸಂವಹನದ ಮಾಧ್ಯಮ ದ ಅವಶ್ಯಕತೆ ಏನು? ಇಸ್ರೋ ದವರು ಉಪಗ್ರಹ ಉಡಾಯಿಸಿದಾಗ, ಕೊರೊನಾ ವೈರಸ್ ನಂತಹ ಮಾರಕ ರೋಗ ಬಂದಾಗ, ರಾಜಕೀಯ ಬಿಕ್ಕಟ್ಟು ಉಂಟಾದಾಗ, ನಾವು ಹೊಸದಾಗಿ ಓದಲು ಕಲಿತವನೊಬ್ಬನಿಗೆ ಅರ್ಥವಾಗುವಂತೆ, ಅಥವಾ ನಮ್ಮ ಸಮಾಜದ ಪರಿಚಯವಿಲ್ಲದ ಮನುಷ್ಯನೊಬ್ಬನಿಗೆ ತಿಳಿಯುವಂತೆ ಹೇಳಬಲ್ಲೆವೇ? ಇದು ನಾವೆಲ್ಲವರೂ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾದಂತಹ ಗಂಭೀರ ವಿಷಯ.
ʻಸೆಮಿನಾರಿನ ಭಾಷಣಗಳು ಹಾಗೂ ಫ್ಯಾಷನ್ ಷೋದ ಬಟ್ಟೆಗಳು ಎರಡೂ ಒಂದೇ. ಅವನ್ನು ಯಾರೂ ನಿಜ ಜೀವನದಲ್ಲಿ ಬಳಸೋದಿಲ್ಲʼ ಅನ್ನುವ ಮಾತೊಂದಿದೆ. ಇದೇ ವರ್ಗಕ್ಕೆ ಪತ್ರಿಕೆಗಳು ಸೇರಿದರೆ ಏನು ಗತಿ? ನಮ್ಮ ಯುವ ಜನರು ಇಂದಿನ ದಿನಮಾನದಲ್ಲಿ ತೊಡುವ ಬಟ್ಟೆಗಳಿಗಾಗಿ ಇಷ್ಟೊಂದು ಟೀಕೆಗಳನ್ನು ಎದುರಿಸುತ್ತಿರುವಾಗ ಫ್ಯಾಷನ್ ಷೋ ಕ್ಕಾಗಿ ರಚಿಸಿದ (ಅವಕ್ಕೆ ಕ್ರಿಯೇಷನ್ ಅಂತಾರೆ) ಅವತಾರಗಳನ್ನು ಬಳಸತೊಡಗಿದರೆ ಏನಾದೀತು ಅಂತ ಕಲ್ಪನೆ ಮಾಡಿಕೊಳ್ಳಿ! ಅಷ್ಟು ಅಪಹಾಸ್ಯಕ್ಕೆ ನಾವು ಬಳಸುವ ಭಾಷೆ ಈಡಾಗುತ್ತಿದೆ. ನಮ್ಮ ಓದುಗರು ಸಜ್ಜನರಾದ್ದರಿಂದ ಅದನ್ನು ನಮ್ಮ ಹತ್ತಿರ ಹೇಳುತ್ತಿಲ್ಲ. ಪತ್ರಿಕೆ ಓದಿ, ಮುಚ್ಚಿಟ್ಟು, ಏನೋ ಇರಬೇಕು ಬಿಡು ಅಂತ ಸುಮ್ಮನೆ ಇರುತ್ತಾರೆ.
ಇಂಗ್ಲಂಡಿನಲ್ಲಿ ಸರಳ ಭಾಷೆಯ ಪರವಾಗಿ ಒಂದು ಜನಾಂದೋಳನವೇ ನಡೆದು ಹೋಯಿತು. ಅಲ್ಲಿ ಸರಕಾರಿ ಆದೇಶಗಳೆಲ್ಲ ಸರಳ ಭಾಷೆಯಲ್ಲಿ ಇರಬೇಕು ಎನ್ನುವ ಕಾಯಿದೆ ಈಗ ಬಂದಿದೆ. ಅದನ್ನು ಧೃಡೀಕರಿಸಲು ಸರಳ ಭಾಷಾ ಆಯೋಗ ಅಲ್ಲಿದೆ.
ಗಾಂಧಿ ಅವರ ಗುಜರಾತಿ ಹಾಗೂ ಹಿಂದಿ ಬರಹಗಳನ್ನು ಅವರ ಆಪ್ತ ಸಹಾಯಕರು ಹಾಗೂ ಸಿಬ್ಬಂದಿ ಯಾಗಿದ್ದ ಮಹದೇವ ದೇಸಾಯಿ, ಪ್ಯಾರೆಲಾಲ ನಾಯರ್ ಹಾಗೂ ಜೆ. ಕಲ್ಯಾಣಂ ಅವರು ಭಾಷಾಂತರಿಸಿದ್ದರು. ಇವರ ಲೇಖನಗಳು ಸರಳ ಇಂಗ್ಲೀಷಿನಲ್ಲಿ ಬರೆದರು ಅಂತ ಕೆಲವರು ಅಭಿಪ್ರಾಯ ಪಡುತ್ತಾರೆ. ಇದ್ದರೂ ಇರಬಹುದು ಅಂತ ನಾನು ಅಂದುಕೊಂಡಿದ್ದೆ. ಆದರೆ ಗಾಂಧಿ ಅವರ ಮೂಲ ಇಂಗ್ಲೀಷು ಹಾಗೂ ಹಿಂದಿ ಬರಹಗಳನ್ನು ನೋಡಿದರೆ ಅವರು ತಮ್ಮ ಭಾಷಾಂತರಕಾರರಿಂದಲೂ ಸರಳವಾಗಿದ್ದ ಭಾಷೆ ಬಳಸುತ್ತಿದ್ದರು ಅನ್ನೋದು ಗೊತ್ತಾಗುತ್ತದೆ.
ಮಾಡಿ ತೋರಿಸುವುದು –
ಜೀವನಕ್ಕೂ ಮಾಧ್ಯಮದಲ್ಲಿ ನ ಪಾತ್ರಗಳಿಗೂ ಸಂಬಂಧ ಇದೆ. ಒಬ್ಬ ಒಳ್ಳೆಯ ಮನುಷ್ಯನಾಗಿರದಿದ್ದರೆ ಒಳ್ಳೆಯ ಪತ್ರಕರ್ತ ನಾಗಿರಲಿಕ್ಕೆ ಸಾಧ್ಯ ಇಲ್ಲ ಅಂತ ಒಂದು ಅಭಿಪ್ರಾಯ ಇದೆ. ಈ ಹಿನ್ನೆಲೆಯ ಗಾಂಧಿಯ ಜೀವನದ ಕೇವಲ ಒಂದೇ ಮಜಲನ್ನು ನೋಡಬಹುದು. ಅದು ಅವರ ಉದಾಹರಣಾರ್ಥಕ ಜೀವನ ಅಥವಾ ಆದರ್ಶಗಳ ಬಗ್ಗೆ ಮಾತಾಡುವ ಮುನ್ನ ಅವನ್ನು ಜೀವಿಸಿ ತೋರಿಸುವುದು.
ಕರಾಟೆ ಯ ಸಿನಿಮಾ ಗಳ ಯಶಸ್ಸಿನ ಬಗ್ಗೆ ಹಾಂಕಾಂಗಿನ ನಿರ್ದೇಶಕ ಸಾಮೋ ಹಂಗ್ ಒಂದು ಕಾರಣ ಕೊಡುತ್ತಾರೆ. ʻʻನೀವು ಹಿಂಗ ಸ್ಟಂಟು ಮಾಡರಿ ಹಂಗ ಮಾಡರಿ ಅಂತ ಹೇಳೋ ಬದಲು ನಾವೇ ಮಾಡಿ ತೋರಿಸಿದರೆ ಸರಳವಾಗಿ ಮಾಡತಾರೆ. ಅದಕ್ಕೇ ಜಗತ್ತಿನಲ್ಲಿ ಇಷ್ಟೊಂದು ಕರಾಟೆ ಸಿನಿಮಾಗಳು ತಯಾರು ಆಗತಾವೆʼʼ ಅಂತ. ಈ ಕರಾಟೆ ಸಿನಿಮಾಗಳಿಗೂ ಗಾಂಧಿ ಜೀವನಕ್ಕೂ ಎತ್ತಣಿಂದೆತ್ತಣ ಸಂಬಂಧ ಅಂತ ವಿಚಾರ ಮಾಡಿದರ ಇದು ಸ್ಪಷ್ಟ ಆಗತದೆ.
ಬರಹ ಹಾಗೂ ಪ್ರತಿಭಟನೆ, ಮೆರವಣಿಗೆ, ಸಭೆಗಳು ಇತ್ಯಾದಿ. ಅವರು ರೇಡಿಯೋ, ಟೀವಿ ಉಪಯೋಗಿಸಿಕೊಂಡಿದ್ದು ಕಮ್ಮಿ. ಬಿಬಿಸಿ ತಂಡವೊಂದು ಅವರ ವಿಡಿಯೋ ಸಂದರ್ಶನ ಮಾಡಲು ಬಂದಾಗ ದೆಹಲಿಯ ಬಿಳಿಯ ಪತ್ರಕರ್ತ ರೊಬ್ಬರು ಗಾಂಧಿಗೆ ಕ್ಯಾಮೆರಾ ಕಂಡ ರೆ ಆಗಲ್ಲ. ಅದರಿಂದ ಅವರು ದೂರ ಇರಲು ಪ್ರಯತ್ನ ಪಡುತ್ತಾರೆ ಅಂತ ಕಿವಿಮಾತು ಹೇಳುತ್ತಾರೆ. ಆದರೆ ಆ ಸಂದರ್ಶನ ನಡೆಯುತ್ತದೆ. ಅದರಲ್ಲಿ ನೀವು ದೇಶಕ್ಕಾಗಿ ಪ್ರಾಣ ಕೊಡಲು ಸಿದ್ಧರೇ? ಅಂತ ವರದಿಗಾರ ಕೇಳುತ್ತಾನೆ. ಇವರು ಇದು ಮೂರ್ಖ ತನದ ಪ್ರಶ್ನೆ ಅಂತ ಹೇಳಿ ಮಾತು ಮುಗಿಸುತ್ತಾರೆ. ಬಿಬಿಸಿ ಯ ಅಂತರ್ಜಾಲ ತಾಣದಲ್ಲಿ ಈ ಸಂದರ್ಶನ ಲಭ್ಯ ವಿದೆ.
ಕೊನೆಯ ಮಾತು
ಗಾಂಧಿ ಹತ್ಯೆಯ ನಂತರ ಬರ್ನಾರ್ಡ ಷಾ ಅವರು ಮಾಡಿದ ಮಾತನ್ನ ಇಲ್ಲಿ ನೆನಪಿಸಿಕೊಳ್ಳೋಣ. ʻಒಳ್ಳೆಯವರಾಗಿರುವುದು ಎಷ್ಟು ಅಪಾಯಕಾರಿ ಅಂತ ಇದರಿಂದ ಗೊತ್ತಾಗುತ್ತದೆʼʼ ಅನ್ನುವ ಮಾತು ಅದು. ಈ ಮಾತು ತಮಾಷೆಯ ಮಾತಾಗಿ ಕಂಡರೂ ಬಹಳ ಗಂಭೀರವಾದದ್ದು. ಇಂದಿನ ಜಗತ್ತಿನಲ್ಲಿನ ಅನೇಕ ಸಮಸ್ಯೆಗಳಿಗೆ ಇದೇ ಕಾರಣ ಅಂತ ನನಗೆ ಅನ್ನಿಸುತ್ತದೆ.
ಯಾರಾದರೂ ಇಷ್ಟೊಂದು ಒಳ್ಳೆಯವರಾಗಿರುವುದು ಸಾಧ್ಯವೇ ಇಲ್ಲ ಅಂತ ನಾವು ಭಾವಿಸಿಕೊಂಡು ಬಿಟ್ಟಿರುತ್ತೇವೆ. ಇವರು ಹಿಂದೂಗಳು. ಇವರಿಗೆ ಇತರ ಧರ್ಮದವರ ಮೇಲೆ ಇಷ್ಟು ಕರುಣೆ ಇರಲು ಸಾಧ್ಯವಿಲ್ಲ. ಅವರು ಬೇರೆಯವರಿಗೆ ಸಹಾಯ ಮಾಡಿದರೆ, ಮಮಕಾರ ತೋರಿಸಿದರೆ, ಅದು ರಾಜಕೀಯ ಕಾರಣಗಳಿಗಾಗಿ ಮಾತ್ರ ಅಂತ ಅಂದುಕೊಳ್ಳುತ್ತೇವೆ.
ನಮ್ಮ ಮನೆಯ ಹತ್ತಿರದಲ್ಲಿ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಇದ್ದರು. ನನ್ನ ಮಕ್ಕಳನ್ನು ಅವರು ತುಂಬ ಹಚ್ಚಿಕೊಂಡಿದ್ದರು. ಅವರು ಅಪಘಾತದಲ್ಲಿ ತೀರಿಕೊಂಡರು. ಅವರ ದೇಹ ಆಸ್ಪತ್ರೆಯಲ್ಲಿ ಇದ್ದಾಗ ನಾನು ನನ್ನ ಮಕ್ಕಳನ್ನು ಕರೆದುಕೊಂಡು ಹೋದೆ. ಅದನ್ನು ದೂರದಿಂದ ನೋಡಿದ ನನ್ನ ಮಕ್ಕಳು ಅಳಲಿಕ್ಕೆ ಶುರು ಮಾಡಿದರು. ಆಸ್ಪತ್ರೆಯಲ್ಲಿ ಏನೋ ತೊಂದರೆ ಆಗಿದ್ದಕ್ಕೆ ನಾವು ತುಂಬ ಹೊತ್ತು ಅಲ್ಲಿ ಇರಬೇಕಾಯಿತು. ಅಲ್ಲಿ ಗೆ ಬಂದಿದ್ದ ಅವರ ಸಂಬಂಧಿಕರೊಬ್ಬರು. ಅಲ್ಲಾ ನೀವು ಅವರ ಜಾತಿಯವರಲ್ಲ, ಊರವರಲ್ಲಾ, ಸಂಬಂಧಿಕರ ಆಗಿರಲಿಕ್ಕೆ ಸಾಧ್ಯ ಇಲ್ಲ. ನಿಮ್ಮ ಮಕ್ಕಳು ಯಾಕ ಇಷ್ಟೊಂದು ಅಳ್ತಾ ಇದ್ದಾರೆ? ಅಂತ ಆಶ್ಚರ್ಯದಿಂದ ಕೇಳಿದರು. ಅದೆಲ್ಲಾ ಮೀರಿದ್ದರೆಪಾ ನಮ್ಮ ಸಂಬಂಧ ಅಂತ ಅಂದು ನಾನು ಮಾತು ಮುಗಿಸಿದೆ.
ಶಿಶುನಾಳದ ಊರ ಜಾತ್ರೆಯಲ್ಲಿ ʻಸವಾಲೊಂದು ನಿನ್ನ ಮ್ಯಾಲೆ ಶಾಹೀರಕೆʼ ಅಂತ ಹಾಡಿಕೊಂಡು ಇದ್ದ ಶರೀಫರನ್ನು ಮನೆಯಲ್ಲಿ ಇಟ್ಟುಕೊಂಡು, ಮಗನಂತೆ ಪ್ರೀತಿಸಿ, ವೇದಾಧ್ಯಯನ ಮಾಡಿಸಿ ರಾಷ್ಟ್ರದ ಅತಿ ಪ್ರಮುಖ ಸೌಹಾರ್ದ ಕವಿಯನ್ನಾಗಿ ಮಾಡಿದ ಗೋವಿಂದ ಭಟ್ಟರು ನಮ್ಮ ನಡುವೆಯೇ ಇದ್ದರು ಅನ್ನುವುದನ್ನು ಮರೆಯುತ್ತೇವೆ. ʻಹುಟ್ಟಿ ಬಂದೆ ಯಲ್ಲಮ್ಮನಾಗಿ ನಿನ್ನ ಮದುವೆಯ ಮಾಡಿ ಕೊಟ್ಟಾರವ್ವ ಜಮದಗ್ನಿಗೆʼ ಎಂದು ಹಾಡಿದ ಸವದತ್ತಿಯ ಯಲ್ಲಮ್ಮನ ಪರಮ ಭಕ್ತ ಹಲಸಂಗಿ ಖಾಜಾ ಸಾಹೇಬರನ್ನ ನಾವು ನೆನಪು ಮಾಡಿಕೊಳ್ಳುತ್ತಿಲ್ಲ.
ನಮಗೆ ಈಗ ಗಾಂಧಿ ಮುಖ್ಯವಾಗುವುದು ಈ ಕಾರಣಗಳಿಂದಾಗಿ ಅಂತ ನನಗೆ ಅನ್ನಿಸುತ್ತುದೆ. ಬರಬರುತ್ತಾ ʻನಾವುʼ ʻಅವರುʼ ಅನ್ನುವ ಮಾತುಗಳು ಹೆಚ್ಚಾಗುತ್ತಿವೆ. ಅವರ ಬಗ್ಗೆ ನಾವೇಕೆ ಬರೆಯಬೇಕು ಅನ್ನೋ ಧೋರಣೆ ಬೆಳೆಯುತ್ತಿದೆ. ಇದು ಸರಿಯಾದ ದಾರಿಯಲ್ಲ. ಜಗತ್ತಿನಲ್ಲಿ ಎಲ್ಲಿ ಅನ್ಯಾಯ ನಡೆದರೂ ಅದಕ್ಕೆ ನಾವು ಸ್ಪಂದಿಸಬೇಕಾತ್ತದೆ. ಇಲ್ಲದಿದ್ದರೆ ನಮ್ಮ ಇರುವಿಕೆಗೇ ಅರ್ಥ ವಿಲ್ಲದಂತಾದೀತು.
ಧನ್ಯವಾದಗಳು
ಎಲ್ಲರಿಗೂ ನಮಸ್ಕಾರ.
–
0 Comments