ಗುರುದೇವ ರವೀಂದ್ರ ನಾಥ ಟ್ಯಾಗೋರ್ ಅವರ `ಶಶೇರ್ ಕವಿತಾ’ ಕಾದಂಬರಿ ಯಲ್ಲಿ ಒಂದು ಪ್ರಸಂಗ ಬರುತ್ತದೆ. ಕಲ್ಕತ್ತಾದ ಓದುಗರು, ಬುದ್ಧಿಜೀವಿ ಗಳು ಎಲ್ಲ ಒಂದು ಕಾಫಿ ಹೌಸ್ ನಲ್ಲಿ ಸೇರುತ್ತಾರೆ. ಅವರು ಟ್ಯಾಗೋರ್ ಅವರ ಹೊಸ ಕವನ ಸಂಕಲನದ ಬಗ್ಗೆ ಚರ್ಚೆ ಮಾಡುತ್ತಿರುತ್ತಾರೆ. ಬಹುಶಃ ಎಲ್ಲರೂ ಟ್ಯಾಗೋರ್ ಅವರ ನ್ನು ಹೊಗಳುತ್ತಾ , ಅವರ ಕವಿತೆ ಗಳನ್ನು ಮೆಚ್ಚುತ್ತಲೇ ಇರುತ್ತಾರೆ . ಅಷ್ಟರಲ್ಲಿ ಒಬ್ಬ ಯುವಕ ಎದ್ದು ನಿಲ್ಲುತ್ತಾನೆ. ಅವನ ಹೆಸರು ಅಮಿತ್ ರೇ . ಲಂಡನ್ ನಲ್ಲಿ ಕಾನೂನು ಪದವಿ ಪಡೆದ ಈತ `ಭಾರತೀಯ ಭಾಷೆ ಗಳ ಸಾಹಿತ್ಯ ಹಳಸು . ಇವಕ್ಕೆ ಹೊಸ ಆಯಾಮ ಬೇಕು’ ಎಂದು ವಾದಿಸಿ ಟ್ಯಾಗೋರ್ ಅವರನ್ನು ತೀವ್ರವಾಗಿ ಟೀಕಿಸುತ್ತಾನೆ. ಒಬ್ಬ ಹೊಸ ಕವಿಯನ್ನು ಪರಿಚಯಿಸುವ ಪ್ರಯತ್ನ ಮಾಡುತ್ತಾನೆ. ಅದರಲ್ಲಿ ತನ್ನನ್ನು ತಾನು ಕಾಣುತ್ತಾನೆ, ಇತರರಿಗೆ ಹೊಸ ದಿಕ್ಕು ತೋರುತ್ತಾನೆ.
“`ಬಂಗಾಳ ವು ರಾಷ್ಟ್ರದ ಸಾಕ್ಷಿ ಪ್ರಜ್ಞೆ . ಅಲ್ಲಿನ ಸಾಂಸ್ಕೃತಿಕ ಜಾಗೃತಿ ದೇಶವನ್ನು ಮುನ್ನಡೆಸುತ್ತದೆ. ಅದು ಭಾರತ ಸ್ವತಂತ್ರ ಸಂಗ್ರಾಮದ ಧ್ರುವತಾರೆ’ ಎನ್ನುವ ಮಾತುಗಳು ನಿಜ. ಆದರೆ ಈ ರಾಜಕೀಯ- ಸಾಂಸ್ಕೃತಿಕ ಕ್ರಾಂತಿ ಗಳು ಶುರು ಆಗಿದ್ದು ಅಲ್ಲಿನ ಕಾಫಿ ಹೌಸ್ ಗಳಿಂದ’’, ಎಂಬ ಮಾತನ್ನು ಬಂಗಾಳಿಗಳು ಕೊಂಚ ಅಭಿಮಾನದಿಂದ, ಕೊಂಚ ತಮಾಷೆಗಾಗಿ ಹೇಳಿಕೊಳ್ಳುತ್ತಾರೆ.
ಕಲ್ಕತ್ತಾದ `ಕಾಲೇಜು ರಸ್ತೆ ಕಾಫಿ ಹೌಸ್’ ಎನ್ನುವುದು ತುಂಬ ಜನಪ್ರಿಯ ಸ್ಥಳ. ಅದಕ್ಕೆ ಅವಿಭಜಿತ ಬಂಗಾಳದ ಇತಿಹಾಸ ದಲ್ಲಿ ಪ್ರಮುಖ ಸ್ಥಾನ ಇದೆ. ಅಲ್ಲಿ ಅನೇಕ ಚಿಂತಕರು, ಬುದ್ಧಿಜೀವಿಗಳು, ಹೋರಾಟಗಾರರು ಪ್ರತಿ ದಿನ ಸೇರುತ್ತಿದ್ದರು. ಅಂದಿನ ಪ್ರಚಲಿತ ವಿದ್ಯಮಾನ ಗಳ ಬಗ್ಗೆ ಚರ್ಚೆ ಮಾಡುತ್ತಿದ್ದರು. ಹೊಸ ವಿಚಾರ ಗಳನ್ನು ಮಂಡಿಸುತ್ತಿದ್ದರು. ಅಲ್ಲಿಂದ ಹೊರಟ ವಿಚಾರಗಳು ಸರಕಾರಕ್ಕೆ ಮಾರ್ಗದರ್ಶಿ ಯಾಗುತ್ತಿದ್ದವು. ಹೋರಾಟಗಾರರು, ಸರಕಾರೇತರ ಸಂಸ್ಥೆ ಗಳು ಈ ಕಾಫಿ ಹೌಸ್ ನ ಚರ್ಚೆಗಳಿಂದ ಪ್ರೇರಣೆ ಪಡೆಯುತ್ತಿದ್ದರು. ಕಾಲಕ್ರಮೇಣ ಇಂತಹ ಅನೇಕ ಕಾಫಿ ಹೌಸ್ ಗಳು ಬಂಗಾಳದ ತುಂಬ ಎಲ್ಲ ಹುಟ್ಟಿಕೊಂಡವು. ತಮ್ಮ ತಮ್ಮ ಪ್ರದೇಶ ಕ್ಕೆ ತನ್ನದೇ ಆದ ಕೊಡುಗೆ ನೀಡಿದವು.
ಕಲ್ಕತ್ತಾ ದಿಂದ 1,700 ಕಿಲೋಮೀಟರ್ ದಕ್ಷಿಣ ಕ್ಕೆ ಇರುವುದು ಬೀದರ್ ನಗರ. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಯಿಂದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗೆ ನಡೆದು ಹೋಗುವಾಗ ಸಿಕ್ಕುವುದು `ಬೀದರ್ ಕಿ ಆವಾಜ್’ ಹಾಗೂ `ಸುರ್ಖ ಜಮೀನ್’ ಪತ್ರಿಕೆ ಗಳ ಕಚೇರಿ. ಕಲ್ಕತ್ತಾ ದಲ್ಲಿ ಕಾಲೇಜು ರಸ್ತೆ ಕಾಫಿ ಹೌಸ್ ಇದ್ದರೆ ಈ ಕಚೇರಿ ಬೀದರ್ ನ ಕಾಫಿ ಹೌಸ್ ಇದ್ದ ಹಾಗೆ. ಎರಡೂ ಪತ್ರಿಕೆ ಗಳ ಸಂಪಾದಕ ಖಾಜಿ ಅರ್ಷದ ಅಲಿ ಅವರು ಅಲ್ಲಿನ ವೈಚಾರಿಕ ಬಾಣಸಿಗ.
ಬಂಗಾಳದ ಸಂಸ್ಕೃತಿ ಗೆ ಹೇಗೆ ಕಾಲೇಜು ರಸ್ತೆ ಕಾಫಿ ಹೌಸ್ ಸಿಂಚನ ಮಾಡಿತೋ ಹಾಗೆ ಬೀದರ್ ನ ಸರ್ವತೋಮುಖ ಅಭಿವೃದ್ಧಿಗೆ ಪ್ರೇರಣೆ ದೊರೆತದ್ದು ಈ ಕಚೇರಿಯ ಅಂಗಳದಿಂದ ಅಂತ ನನ್ನ ಗಟ್ಟಿ ನಂಬಿಕೆ . ಮೊಟ್ಟ ಮೊದಲನೆಯದಾಗಿ ಇದು ಪತ್ರಕರ್ತರ ಅಡ್ಡಾ. ಇಲ್ಲಿಗೆ ಎಲ್ಲಾ ಪೇಪರ್- ಟಿವಿ- ಪೋರ್ಟಲ್ ನವರು ಬಂದು ದಿನಕ್ಕೆ ಒಂದು ಎರಡು ತಾಸು ಕೂತು ಹೋಗುವುದು ರೂಢಿ. ಪ್ರಥಮ ವಾಗಿ ಇಲ್ಲಿ ಸುದ್ದಿಯ ಹಂಚಿಕೆ- ವಿತರಣೆ ಆಗುವುದು. ನಂತರ ಚಹಾ ಪಾನ . ಪತ್ರಕರ್ತರ ಆಧ್ಯಾತ್ಮಿಕ ಹಸಿವನ್ನು ತಣಿಸುವವರು ಅರ್ಷದ ಅಲಿ ಆದರೆ ಅಲ್ಲಿಗೆ ಬಂದವರ ಲೌಕಿಕ ಜೀವನದ ಸಮಸ್ಯೆಗಳ ಪರಿಹರಿಸುವನು ಅವರ ಸೋದರ ಸಂಬಂಧಿ ಖಾಜಿ ಅಲಿ ಉದ್ದಿನ ಅಥವಾ ಅಲಿ ಬಾಬಾ. `ಊರಿಗೆ ಬಂದವರು ನೀರಿಗೆ ಬರಲಾರರೇ’ ಎನ್ನುವ ಗಾದೆ ಯಂತೆ ಆವಾಜ್ ಕಚೇರಿಗೆ ಬಂದವರು ಅಲಿ ಬಾಬಾ ಭೇಟಿ ಆಗದೆ ಹೋಗುವರೆ ಎನ್ನುವುದೂ ಸಹ ಸತ್ಯ.
ಇಲ್ಲಿನ ಚರ್ಚೆ ಗಳು ಬಹುವಿಧ. ಇವತ್ತಿನ ತಲೆ ಬರಹದ ತಪ್ಪು -ಒಪ್ಪಿನ ವಾದ, ನಾಳಿನ ತಲೆ ಬರಹದ ಸುಳಿವು, ನಗರ- ಜಿಲ್ಲೆ- ರಾಜ್ಯ- ದೇಶ- ಜಗತ್ತಿನ ಸುದ್ದಿಗಳು, ಸುದ್ದಿಯ ಹಿನ್ನೆಲೆ, ವಿವಿಧ ಪತ್ರಿಕೆ ಸಂಪಾದಕೀಯ, ಅವರು ಹೀಗೆ ಬರೆದದ್ದು ಒಳ್ಳೆಯದು, ಯಾರದು ಅಷ್ಟು ಸರಿಯಲ್ಲ, ಯಾರು ಯಾವ ಸುದ್ದಿಯನ್ನು ಹೇಗೆ ನಿರ್ವಹಿಸ ಬಹುದಾಗಿತ್ತು, ಇತ್ಯಾದಿ. ಇಂಥವನ್ನು ಕಿರಿಯರು ಶುರು ಮಾಡಿದರೆ, ಅರ್ಷದ ಅಲಿ ಅವರು ತಮಗೂ ಪತ್ರಿಕೋದ್ಯಮಕ್ಕೂ ಸಂಬಂಧ ಇಲ್ಲ, ತಾನು ಕೇವಲ ಒಬ್ಬ ಆಸಕ್ತಿಕರ ಓದುಗ ಅನ್ನುವಂತೆ ಇವುಗಳನ್ನು ವಿಶ್ಲೇಷಣೆ ಮಾಡುವರು. ಇಲ್ಲವೇ, ಉಳಿದವರು ಆಡಿದ ಮಾತುಗಳನ್ನೆಲ್ಲ ಕೇಳಿದ ಮೇಲೆ ಕೊನೆಯ ಬಾಲ್ ಸಿಕ್ಸರ್ ಎನ್ನುವಂತೆ ಏನೋ ಒಂದು ಅರ್ಥ ಗರ್ಭಿತ ಮಾತು ಹೇಳಿ, ಉಳಿದವರನ್ನೆಲ್ಲ ಚಿಂತೆಗೆ ಹಚ್ಚುವರು. ಇಲ್ಲವೇ, “ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯ ಹೀಗೆ ಇದೆಯಾ? ಅದು ಹಾಗೆ ಇರಬೇಕಾದ್ದು ಅಲ್ಲವೇ?’’ ಅಂತ ಹೇಳಿ ಚಕಿತ ಗೊಳಿಸಿಬಿಡುವರು.
ನಾನು ಪತ್ರಿಕೋದ್ಯಮ ಪದವಿ ಪಡೆದವನು ಅಲ್ಲ. ಇದನ್ನು ಹೇಳಿ ಕೊಳ್ಳಲು ನನಗೇನೂ ಹಿಂಜರಿಕೆ ಇಲ್ಲ. ಪತ್ರಿಕೋದ್ಯಮ ದ ಮೂಲ ತತ್ವವೇ ಸತ್ಯ ಹೇಳುವುದು, ಸುಳ್ಳು ಹೇಳದೇ ಇರುವುದು ಅಂದ ಮೇಲೆ ನಿಜ ಹೇಳಲು ನಾಚಿಕೆ ಏಕೆ? ಇಂಗ್ಲೀಷು ಸಾಹಿತ್ಯ ದ ಸ್ನಾತಕ ಪದವಿ ಪಡೆದ ನಾನು ಕ್ಷೇತ್ರ ಕಾರ್ಯ ದಿಂದಲೇ ಕೆಲಸ ಕಲಿತದ್ದು. ಅದರಲ್ಲಿಯೂ ನಾನು ಬೀದರ್ ಕಿ ಆವಾಜ್ ನ ಕಾಫಿ ಹೌಸ್ ಹಾಗೂ ಅದರ ಅಲಿ ಅವರಲ್ಲಿ ಕಲಿತದ್ದು ಬಹಳ ಹಾಗೂ ಅಮೂಲ್ಯ.
ಬೀದರ್ ನ ಪ್ರಧಾನಿ ಯಾಗಿದ್ದ ಮಹಮೂದ್ ಗವಾನ ಆಫ್ರಿಕಾದ ಶಿಕ್ಷಕರೊಬ್ಬರಿಗೆ ಪತ್ರ ಬರೆದು , ತಾನು ಸ್ಥಾಪಿಸುತ್ತಿರುವ ವಿಶ್ವ ವಿದ್ಯಾಲಯ ಸೇರಿಕೊಳ್ಳುವಂತೆ ಕೇಳಿ ಕೊಂಡ ನಂತೆ : “ನಾನು ಇಲ್ಲಿ ಬರೀ ಪಾಠ -ಪ್ರವಚನ ಕಲಿಸುತ್ತಿಲ್ಲ . ಇಲ್ಲಿಯ ಹುಡುಗರ ಬುದ್ಧಿ ಯನ್ನು ತೀಕ್ಷ್ಣ, ಮನಸ್ಸನ್ನು ಗಟ್ಟಿ ಹಾಗೂ ಹೃದಯ ವನ್ನು ಮುಕ್ತ ಮಾಡಲು ಪ್ರಯತ್ನಿಸುತ್ತಿದ್ದೇನೆ’’. ನನ್ನ ಬುದ್ಧಿ- ಮನಸ್ಸು – ಹೃದಯದ ಮಟ್ಟಿಗೆ ಅಂತೂ ಆವಾಜ್ ಕಚೇರಿಯ ಭೇಟಿ ಇದೇ ಕೊಡುಗೆ – ಅನುಭವ ನೀಡಿದ್ದು ಖರೆ.
ಇಲ್ಲಿ ಕೇವಲ ಸುದ್ದಿ ಚರ್ಚೆ ಆಗೋದಿಲ್ಲ. ಇಲ್ಲಿ ವಿವಿಧ ಸಾಮಾಜಿಕ, ಆರ್ಥಿಕ, ರಾಜಕಿಯ, ಪ್ರಚಲಿತ ವಿದ್ಯಮಾನ ಗಳು ಚರ್ಚೆಗೆ ಬರುತ್ತವೆ. ಅದರಲ್ಲಿ ವಿವಾದಿತ, ಬಹು ಚರ್ಚಿತ, ಧ್ರುವಿಕರಿಸುವ ವಿಷ್ಯಗಳೂ ದಂಡಿಯಾಗಿ ಇರುತ್ತವೆ. ಈ ಸುಸಂಪ್ರದಾಯ ಇಂದಿಗೂ ಜಾರಿ ಇದೆ.
ಇದು ಕೆಲವರ ಟೀಕೆಗೆ ಒಳಗಾಗಿದೆ. ಜಿಲ್ಲೆಯ ಪತ್ರಕರತರೆಲ್ಲ ಆವಾಜ್ ನ ಕಾಪಿ ಮಾಡುತ್ತಾರೆ. ಇವರು ವರದಿಗಾರರಲ್ಲ. ಭಾಷಾಂತರ ಕಾರರು, ಅವರಿಗೆ ಸ್ವಂತ ಬುದ್ಧಿ ಇಲ್ಲ. ಅಲಿ ಹೇಳಿದಂತೆ ತಲೆ ದೂಗುತ್ತಾರೆ ಎಂದು ಕೆಲವರ ಅಂಬೋಣ. ಆದರೆ ಮಾತಿಗೆ ಮಾತು ಸೇರಿದಾಗಲೆ ಅಲ್ಲವೇ ಅರ್ಥ ಮಥಿಸುವುದು ? ವಾದೇ ವಾದೇ ಜಾಯತೆ ತತ್ವಬೋಧಹ ! , ಎನ್ನುವುದು ಸರ್ವ ಕಾಲಿಕ ಸತ್ಯ ಅಲ್ಲವೇ? ಇಷ್ಟಾಗಿಯೂ ಅಲಿ ಅವರು ಹೇಳುವುದು ಅವರ ಅಭಿಪ್ರಾಯ ಮಾತ್ರ . ಅದನ್ನು ಸ್ವೀಕರಿಸುವುದು ಬಿಡುವುದು, ಅದರ ಸರಿ ತಪ್ಪು ಚಾಳಿಸಿ ನೋಡುವುದು ಕೇಳುಗರ ಕರ್ತವ್ಯ ಅಲ್ಲವೇ ? ಹಂಸ ಕ್ಷೀರ ನ್ಯಾಯದ ಪ್ರಜ್ಞೆ ವರದಿಗಾರರಿಗೆ ಇರಬೇಡವೇ ?
ಇನ್ನೂ ಆವಾಜ್ ಕಚೇರಿ ಯನ್ನು `ಚಂಡಾಳ ಚೌಕಳಿ ಕೂಟ ’, `ಟಪೋರಿ ಅಡ್ಡಾ’, `ಮನ್ಯಾಗ ವಜ್ಜಿ ಅದವರು ಜತಿಗೆ ಕೂಡೋ ಜಾಗಾ’ ಅಂತ ಕೆಲವರು ಹೀಯಾಳಿಸಿದ್ದು ಉಂಟು. ಆದರೆ ಅವರಿಗೆ ಇಲ್ಲಿ ನಡೆದ ಚರ್ಚೆ ಗಳ ಬಗ್ಗೆ ಅರಿವು ಇಲ್ಲ. `ಬಲ್ಲವರೇ ಬಲ್ಲರು ಬೆಲ್ಲದ ಸವಿಯ’, ಅಲ್ಲವೇ?
“ವಿಷಯ ಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದವನು ಪಂಡಿತ ಅಲ್ಲ. ತನಗೆ ತಿಳಿ ದದ್ದನ್ನು ಇತರರಿಗೆ ತಿಳಿಸಿ ಹೇಳುವನು ಪಂಡಿತ’’ ಅನ್ನುವುದು ಒಂದು ಅರ್ಥಪೂರ್ಣ ಸುಭಾಷಿತ. ಆ ಲೆಕ್ಕದಲ್ಲಿ ಅರ್ಷದ ಅಲಿ ಅವರದ್ದು ನಿಜವಾದ ಅರ್ಥದ ಪಾಂಡಿತ್ಯ.
ಇತರ ಹಿರಿಯ ಪತ್ರಕರ್ತರಲ್ಲಿ ಸಹಜವಾಗಿ ಕಂಡು ಬರುವ ದಿಮಾಕು, ಯಮಕು ನನಗೆ ಅಲಿ ಅವರಲ್ಲಿ ಯಾವತ್ತೂ ಕಾಣಲಿಲ್ಲ. ಅತ್ಯಂತ ಕಿರಿಯ ವಯಸ್ಸಿನ ವರದಿಗಾರ ಜೊತೆಗೂ ಅವರು ಅಷ್ಟೇ ಸಹಜವಾಗಿ ಮಾತಾಡುತ್ತಿದ್ದರು. ಅವರಿಗೆ ಬೇಕಾದ ಮಾಹಿತಿ ಯನ್ನು ತಮ್ಮ ನೆನಪಿನಿಂದ ಅಥವಾ ಹಳೆಯ ಪೇಪರ್ ಗಳ ಕಟ್ಟಿನಿಂದ ಅಥವಾ ಪುಸ್ತಕ ದಿಂದ ತೆಗೆದು ಕೊಡುತ್ತಿದ್ದರು. ಇದು ಕೇವಲ ಬೀದರ್ ನ ಯುವ ಪತ್ರಕರ್ತರಿಗೆ ಸೀಮಿತ ವಾಗಿರಲಿಲ್ಲ. ಇಡೀ ರಾಜ್ಯದ, ಒಮ್ಮೊಮ್ಮೆ ನೆರೆ ರಾಜ್ಯದ ಪತ್ರಕರ್ತರ ಪಾಲಿಗೆ ಅಲಿ ಅವರು 24 x 7 ಹೆಲ್ಪ್ಲೈನ್ ಆಗಿದ್ದರು. ಈಗಲೂ ಆಗಿದ್ದಾರೆ. `ನಾನು ಇವರಿಗೆ ಈ ಮಾಹಿತಿ ಕೊಟ್ಟೆ, ಇದರಿಂದ ಈ ಸುದ್ದಿಯಾಯಿತು, ಆಡಳಿತ ದಲ್ಲಿ, ಸಮಾಜ ದಲ್ಲಿ ಈ ಬದಲಾವಣೆ ಆಯಿತು’ ಎನ್ನುವ ಅಹಂ ಅನ್ನು ಅವರ ಮಾತು – ಹಾವ ಭಾವ ದಲ್ಲಿ ನಾನು ಎಂದಿಗೂ ಕಂಡಿಲ್ಲ.
ಅವರ ಮನೆ- ಕಚೇರಿಯಲ್ಲಿ ಅವರು ಕಟ್ಟಿಕೊಂಡಿರುವ ವೈಯಕ್ತಿಕ ಗ್ರಂಥಾಲಯಗಳ ಬಗ್ಗೆ ಹೇಳದೇ ಇರುವುದು ಸಾಧ್ಯವೇ ಇಲ್ಲ. ಅವು ಕೇವಲ ಪುಸ್ತಕ ಗ್ರಂಥಾಲಯ ಅಲ್ಲ- ಅವು ಪೂರಕ ಮಾಹಿತಿ ಮತ್ತು ಸಲಕರಣೆ ಆಕರ. ಅಲ್ಲಿ ಹಳೆಯ ದಿನ ಗಳಲ್ಲಿ ಬಳಸಿದ ಕ್ಯಾಮರಾ, ಫೋಟೋ ರೀಲು, ಯಂತ್ರದ ಬಿಡಿ ಭಾಗಗಳು, ಅಪರೂಪದ ಕಪ್ಪು ಬಿಳುಪು ಫೋಟೋ, ಎಂದೋ ಜೋಡಿಸಿದ, ಈಗಲೂ ಕಪ್ಪು ಮಸಿಯಲ್ಲಿ ಮುಳುಗಿರುವ ಜೋಡು ಮೊಳೆ, ಪುಸ್ತಕ, ಆಯೋಗ, ಸಮಿತಿ ವರದಿಗಳು, ಪತ್ರಿಕೋದ್ಯಮ, ಸಾಹಿತ್ಯ, ರಾಜ್ಯ- ದೇಶ ಜಾಗತಿಕ ಇತಿಹಾಸ, ಪರಂಪರೆ, ಧರ್ಮ, ತೌಲನಿಕ ಸಂಸ್ಕೃತಿ, ಸರ್ಕಾರಿ ನೀತಿಯ ವಿಶ್ಲೇಷಣೆ, ಕೃಷಿ, ನೀರಾವರಿ, ಹೈನು ಗಾರಿಕೆ , ವಾಸ್ತು ಶಿಲ್ಪ, ಕಲೆ ಹಾಗೂ ಇತರ ವಿಷಯ ಗಳ ಬಗ್ಗೆ ಪುಸ್ತಕ ಗಳನ್ನು ನಾನು ಇವರ ಲೈಬ್ರರಿ ಯಲ್ಲಿ ನೋಡಿದ್ದೇನೆ. ಗಡಿಗೆ – ಭಾಷೆಗೆ ಸಂಬಂಧ ಪಟ್ಟ ಮಾಹಿತಿ ರಾಜ್ಯ ಸರ್ಕಾರದ ಸಮಿತಿ ಯೊಂದಕ್ಕೆ ಸಿಗದೇ ಹೋದಾಗ ಅವರು ಬೆಂಗಳೂರಿನಿಂದ ಅಧಿಕಾರಿ ಯೊಬ್ಬರನ್ನು ಕಳಿಸಿದರು- ಅಲಿ ಅವರ ಗ್ರಂಥಾಲಯ ದಿಂದ ಮಾಹಿತಿ ಪುಸ್ತಕ ಪಡೆಯಲು !
ಉರ್ದು- ಹಿಂದಿ ಸಾಹಿತ್ಯ ಕ್ಷೇತ್ರ ದಲ್ಲಿ ಅವರ ಪ್ರೀತಿ- ಹಸಿವು- ಅರಿವು ತೀವ್ರ. ಪ್ರತಿ ರಾಜಕೀಯ, ಸಾಮಾಜಿಕ ಪರಿಸ್ಥಿತಿ ಗೆ ಹೊಂದುವ ಶಾಯರಿ- ಕಾವ್ಯ – ಕಾದಂಬರಿಯ ಸಾಲುಗಳನ್ನು ಸಟ್ಟನೆ ಹೇಳುವುದು ಅವರ ಕ್ರಮ. ಇದು ಕೆಲವರಲ್ಲಿ ಅಚ್ಚರಿಯ ಉದ್ಘಾರ ವನ್ನೂ, ಹಲವರಲ್ಲಿ ಅಭಿಮಾನದ ಸೊಲ್ಲನ್ನೂ ಹೊರಡಿಸಿದ್ದನ್ನು ನಾನು ಕಂಡಿದ್ದೇನೆ. ಅಲಿ ಅವರ ಆತ್ಮೀಯ ಸೊಲ್ಲು, ಮಾಹಿತಿ ಪೂರೈಕೆ, ಸದಾ ಅಧ್ಯಯನ ಶೀಲತೆ ಅನೇಕರನ್ನು ಪ್ರೇರೇಪಿಸಿತು. ಅದರಲ್ಲಿ ಪ್ರಮುಖರು ಹಿರಿಯ ಪತ್ರಕರ್ತ, ಲೇಖಕ, ಚಿಂತಕ ದೇವು ಪತ್ತಾರ. ಕರ್ನಾಟಕದ ಬಹು ಶ್ರುತ ವಿಧ್ವಂಸ ರು, ವಿವಿಧ ಕಲೆ ಗಳ ಬಗ್ಗೆ ಸಮಾನ ಆಸಕ್ತಿ, ತಿಳುವಳಿಕೆ ಇರಿಸಿಕೊಂಡಿರುವ, ರಾಜ್ಯ- ದೇಶದ ಇತಿಹಾಸ – ಪರಂಪರೆಯ ತಿಳಿವನ್ನು ಹೊಂದಿದ, ದಖನ್ ಸಂಸ್ಕೃತಿ, ಬಹಮನಿ ಇತಿಹಾಸ, ಮಹಮೂದಗವಾನ ಆಡಳಿತದ ಬಗ್ಗೆ ರಾಜ್ಯದ ಚಿಂತಕರ ವಲಯ ದ ಲ್ಲಿ ಕುತೂಹಲ, ಜಾಗೃತಿ, ಉತ್ಸಾಹ ಮೂಡಿಸಿದ ದೇವು ಅವರ ಮೇಲೆ ಅಲಿ ಅವರ ಪ್ರಭಾವ ಗಣನೀಯ ವಾದದ್ದು.
ಅಲಿ ಅವರು ಕೇವಲ ಪೇಪರ್ ಪೆನ್ ಪತ್ರಿಕೋದ್ಯಮಿ ಆಗಿರದೆ ನೆಲದ ಮೇಲೆ ನಿಂತು ಯೋಚಿಸುವ, ಜನ ಜಾಗೃತಿ ಮೂಡಿಸುವ ವೈಚಾರಿಕ ಹೋರಾಟಗಾರರೂ ಹೌದು. ಗುಲ್ಬರ್ಗ ವಿಶ್ವ ವಿದ್ಯಾಲಯದ ಬೀದರ್ ಕೇಂದ್ರ ಆಗಲು, ಕಾರಂಜಾ ಸಂತ್ರಸ್ತರಿಗೆ ನ್ಯಾಯ ಸಿಗಲು , ಬೀದರ್ – ಗುಲ್ಬರ್ಗ ರೈಲ್ವೆ ಮಾರ್ಗ ನಿರ್ಮಾಣ ಆಗಲು, ಬೀದರ್ ನಲ್ಲಿ ಪಶು ವೈದ್ಯ ವಿವಿ ಆಗಲು, ಸರ್ಕಾರಿ ವೈದ್ಯ ಕಾಲೇಜು ಆಗಲು, ಅವರು ಪತ್ರಿಕೆ ಮೂಲಕ ಹೋರಾಟ ನಡೆಸಿದರು. ಕುರ್ಚಿ ಯಲ್ಲಿ ಕುಳಿತವರ ಕಣ್ಣು ತೆರೆಯಲು ಅವರ ಲೇಖನ ಗಳು ಕಾರಣ ಆಗಿವೆ. “ಬೀದರ್ ಜಿಲ್ಲೆ ಪ್ರವಾಸೋದ್ಯಮ ಕೇಂದ್ರ ವಾಗಲು , ಆಡಳಿತ ಸುಸೂತ್ರ ವಾಗಲು, ಅಲ್ಲಿನ ಜನರಲ್ಲಿ ಜಾಗ್ರತಿ ಮೂಡಲು ಆವಾಜ್ ನ ಕೊಡುಗೆ ಬಹಳ ಇದೆ. ಎಲ್ಲಾ ಜಿಲ್ಲೆ ಗಳಲ್ಲಿ ಅಲಿ ಅವರಂತಹ ಪತ್ರಕರ್ತ ರೊಬ್ಬರು ಇದ್ದರೆ ಜನರ ಪಾಡು ಲೇಸು ಆಗುವುದರಲ್ಲಿ ಸಂಶಯ ಇಲ್ಲ’’ ಎಂದು ಹಿರಿಯ ಐ ಎ ಎಸ್ ಅಧಿಕಾರಿ ಯೊಬ್ಬರು ನನಗೆ ಹೇಳಿದ್ದರು. ಬೀದರ್ ಜಿಲ್ಲಾ ಯಲ್ಲಿ ಹಿರಿಯ ಅಧಿಕಾರಿ ಯಾಗಿದ್ದ ಅವರು ಮುಂದೆ ರಾಜ್ಯದ ಮುಖ್ಯ ಕಾರ್ಯದರ್ಶಿ ಯಾಗಿದ್ದರು.
ಜಿಲ್ಲೆಯ ಜನರಲ್ಲಿ ಹಾಸು ಹೊಕ್ಕಾಗಿ ರುವ ಧಾರ್ಮಿಕ ಸಹಿಷ್ಣು ತೆ ಯನ್ನು ಬಹು ಜನರಿಗೆ ತಿಳಿಸಲು, ಇಲ್ಲಿನ ಸಹಜ ಬಹು ಸಂಸ್ಕೃತಿ ಯ ಬಗ್ಗೆ ರಾಜ್ಯ ದೇಶದ ಜನರಲ್ಲಿ ನಂಬಿಕೆ ಮೂಡಿಸಲು ಅಲಿ ಅವರು ಸತತವಾಗಿ ಲೇಖನ ಬರೆದರು. ಇದನ್ನು ಸರಳವಾಗಿ ನಂಬದವರ ಮುಂದೆ ಸಹಿತ ಅತ್ಯಂತ ಭಾವಪೂರ್ಣ ವಾಗಿ ಅದರ ಇತಿಹಾಸ ವನ್ನು ಹಾಗೂ ಅದರ ಇಂದಿನ ಪ್ರಸ್ತುತತೆ ಯನ್ನು ಅವರು ತಿಳಿ ಹೇಳುತ್ತಾರೆ. ಮಾನವ ಸಹಜ ಸಂಭಾವಿತತೆ ಯಲ್ಲಿ ಅವರ ವಿಶ್ವಾಸ ಇನ್ನೂ ಹೋಗಿಲ್ಲ.
ಮತೀಯ ಅಲ್ಪಸಂಖ್ಯಾತರ ಮುಂದಿರುವ ಸವಾಲು ಗಳು ಹಾಗೂ ಅವುಗಳ ಪರಿಹಾರ ಸಾಧ್ಯತೆ ಗಳ ಬಗ್ಗೆ ಅಲಿ ಅವರಿಗೆ ಸ್ಪಷ್ಟ ಚಿಂತನೆ ಇದೆ. ಅದನ್ನು ಅವರು ಲೇಖನ ಹಾಗೂ ಭಾಷಣ ಗಳ ಮೂಲಕ ಅನೇಕ ಬಾರಿ ಪ್ರಸ್ತುತ ಪಡೆಸಿದ್ದಾರೆ. ಅವರ `ಕರ್ನಾಟಕದ ಚುನಾವಣೆ ಗಳಲ್ಲಿ ಮುಸ್ಲಿಮರ ಪಾಲುದಾರಿಕೆ’
ಎನ್ನುವ ಇಂಗ್ಲೀಷ್ ನಲ್ಲಿ ಪುಸ್ತಕ ಭಾರತೀಯ ಚುನಾವಣೆ ಅಧ್ಯಯನ (ಸೆಫ್ಯಾಲೋಜಿ ) ಇತಿಹಾಸ ದಲ್ಲಿ ಅತ್ಯಂತ ಪ್ರಮುಖ ಕೊಡುಗೆ ಗಳಲ್ಲಿ ಒಂದು.
ಎರಡು ಬಾರಿ ಅಲಿ ಅವರು ಕರ್ನಾಟಕ ರಾಜ್ಯ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ಆಗ ಅವರು ಕೇಳಿದ ಪ್ರಶ್ನೆ ಗಳ ಬಗ್ಗೆ ಒಂದು ಮಹಾ ಗ್ರಂಥವನ್ನೇ ಹೊರ ತಂದಿದ್ದಾರೆ. ಒಂದು ರೀತಿಯಲ್ಲಿ ಅದು `ಜನಸಮಾನ್ಯನ ಕಣ್ಣಲ್ಲಿ ಕರ್ನಾಟಕದ ಇತಿಹಾಸ’. ಸರ್ಕಾರಿ ಯೋಜನೆಗಳು ತಮ್ಮ ಮೂಲ ಉದ್ದೇಶ ವನ್ನು ತಲುಪಿವೆಯೇ ಎಂಬ ಬಗ್ಗೆ ಗಂಭೀರ ಅಧ್ಯಯನ ಮಾಡಲು ಬಯಸುವ ಸಂಶೋಧಕರಿಗೆ ಇದು ಮಾರ್ಗದರ್ಶಿ ಪುಸ್ತಕ ಎಂದೇ ನನ್ನ ಭಾವನೆ. ಇದು ಕೇವಲ ಹೈದ್ರಾಬಾದು ಕರ್ನಾಟಕ – ಕಲ್ಯಾಣ ಕರ್ನಾಟಕ ಕ್ಕೆ ಸೀಮಿತ ವಾಗಿಲ್ಲ. ಅದರ ಹರಿವು ಇಡೀ ರಾಜ್ಯಕ್ಕೆ ವ್ಯಾಪಿಸಿದೆ.
ಅವರ ಪರಿಷತ್ತಿನ ಸದಸ್ಯತ್ವದ ಬಗ್ಗೆ ನಾನು ನೆನಪು ಇಟ್ಟುಕೊಳ್ಳಲು ಬಯಸುವ ವಿಷಯ ಯಾವುದು ಎಂದರೆ ಆಳುವ ಪಕ್ಷದಲ್ಲಿ ಇದ್ದರೂ ಅವರು ಎಂದೂ ಅದರ ಅಡಿಯಾಳಾಗಿ ನಡೆದುಕೊಳ್ಳಲಿಲ್ಲ. ಸ್ವಾಭಿಮಾನಿ ಪತ್ರಕರ್ತ ನೊಬ್ಬ ಪರಿಷತ್ತಿನ ಮೊಗಸಾಲೆ ಯೊಳಗೆ ತಿರುಗಾಡುವಾಗ ಅವನ ಮನಸಿನಲ್ಲಿ ಸಹಜವಾಗಿ ಬರಬಹುದಾದ ಪ್ರಶ್ನೆ ಗಳನ್ನು ಯಾವ ಮುಲಾಜು – ಹೆದರಿಕೆ ಇಲ್ಲದೇ ಕೇಳುವ ರೀತಿಯಲ್ಲಿ ಅವರು ನಡೆದು ಕೊಂಡರು. ಈ ಸ್ವಭಾವ ಈಗಿನ ಕಾಲದ ನಾಯಕರಲ್ಲಿ , ನಾಮ ನಿರ್ದೇಶಿತ ಸದಸ್ಯ ರಲ್ಲಿ ಕಮ್ಮಿ.
ಭಾಲ್ಕಿ ನಗರ ಸಭೆಯ ಅಧ್ಯಕ್ಷರ ಮಗನಾಗಿ ಹುಟ್ಟಿದ ಅಲಿ ಅವರಿಗೆ ವಂಶ ಪಾರಂಪರ್ಯ ವಾಗಿ ಬಂದಿದ್ದು ರಾಜಕೀಯ ಅಧಿಕಾರ ಅಲ್ಲ, ಮುತ್ಸದ್ದಿತನ ಹಾಗೂ ತನ್ನ ಸುತ್ತಲಿನ ನಾಗರೀಕರ ಸಮಸ್ಯೆಗಳಿಗೆ ಸ್ಪಂದಿಸುವ ಗುಣ, ಮತ್ತು ಓದುವ -ಬರೆಯುವ ಚಟ. ಇದರ ಸಂಪೂರ್ಣ ಸದುಪಯೋಗ ವನ್ನು ಅಲಿ ಬಳಸಿಕೊಂಡರು . ಕಾಲೇಜು ದಿನ ಗಳಿಂದ ಅವರು ಬಹು ಅವಧಾನಿ ಹಾಗೂ ಬಹು ವಿಷಯ ಆಸಕ್ತ ರಾಗಿ ಬೆಳೆದರು. ಅವರ ಸ್ಪಂದನಶೀಲತೆ, ಓದುವ ಬರೆಯುವ, ಚಿಂತನ ಮಾಡುವ ಚಟ ದಿಂದ ಅವರ ವ್ಯಕ್ತಿತ್ವ ವಿಕಾಸ ಆಗಿದ್ದು ಅಷ್ಟೇ ಅಲ್ಲ, ಇಡೀ ಬೀದರ್ ಜಿಲ್ಲೆ ಯ ಹಾಗೂ ತಕ್ಕ ಮಟ್ಟಿಗೆ ಉತ್ತರ ಕರ್ನಾಟಕದ ವಿಕಾಸ ಕ್ಕೂ ಅದು ಅನುವು ಆಯಿತು.
“ಪತ್ರಿಕೋದ್ಯಮ ಎನ್ನುವುದು ಒಂದೇ ದಿನದ ಯುದ್ಧ ಅಲ್ಲ. ಇಲ್ಲಿ ನಾವು ಒಂದು ದಿನ ಖಡ್ಗ ಝಳಪಿಸಿ ಮರುದಿನ ಮನೆ ಬಿಟ್ಟು ಹೊರಗೆ ಬರದೇ ಇದ್ದರೆ ಜನ ನಮ್ಮನ್ನು ನಂಬೊದಿಲ್ಲ,’’ ಎಂದು ಒಮ್ಮೆ ಅವರು ನನಗೆ ಹೇಳಿದ್ದರು. ಅದರ ಹಿಂದೆ ನನಗೆ ಹತಾಶೆ ಕಾಣಲಿಲ್ಲ. ನನಗೆ ಕಂಡಿದ್ದು ಮಾನವ ಪ್ರಯತ್ನ ದಲ್ಲಿ ಅವರಿಗೆ ಇದ್ದ ಅಪರಿಮಿತ ವಿಶ್ವಾಸ ಹಾಗೂ ನಿರ್ಭಾವ ಪತ್ರಿಕೋದ್ಯಮ ದಲ್ಲಿ ನಂಬಿಕೆ.
`ಬೀದರ್ ಕಿ ಆವಾಜ್’ ಎಂದರೆ ಬೀದರ್ ನ ದನಿ. ` ಸುರ್ಖ್ ಜಮೀನ್’ ಎಂದರೆ ಉರ್ದು ಭಾಷೆಯಲ್ಲಿ ಕೆಂಪು ಮಣ್ಣು ಅಂತ ಅರ್ಥ. ಸುರಖೀ ಅಂದರೆ ಮುಖ್ಯಾಂಶ ಅಂತಲೂ ಅರ್ಥ. ಬೀದರ್ ನ ಕಾಫಿ ಹೌಸ್ ನಿಂದ ಹೊರ ಸೂಸುವ ಅನುಕಂಪ ಪೂರಿತ ಜ್ಞಾನದ ಸೆಲೆ ಎಂದಿಗೂ ಬತ್ತದೇ ಇರಲಿ. ಬೀದರ್ ಜಿಲ್ಲೆಯ ಜನರ ಸಂಕಟ, ಗುಟ್ಟು, ಆನಂದ, ಸಂಭ್ರಮಕ್ಕೆ ಇದು ದನಿ ಆಗಲಿ. ಇಲ್ಲಿನ ಕೆಂಪು ಮಣ್ಣಿನ ದನಿ ಎಂದಿಗೂ ನಿಲ್ಲದೇ ಇರಲಿ.
–00–00–00–
0 Comments